ಭಾರತೀಯರ ಭಾವನೆಗಳನ್ನು ಅರ್ಥೈಸಿದ ಪಾಕ್ ಪ್ರಧಾನಿ ಇಮ್ರಾನ್ ಗೆ ಧನ್ಯವಾದ: ಪ್ರಧಾನಿ ಮೋದಿ
ಹೊಸದಿಲ್ಲಿ, ನ.9: ಸಿಖ್ಖರ ಪವಿತ್ರ ಸ್ಥಳ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ನ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಇಂದು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಭಾಗವಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಭಾರತೀಯ ಭಾವನೆಗಳನ್ನು ಅರ್ಥೈಸಿ ಭಾರತ ಸರಕಾರದ ಜತೆ ಈ ಯೋಜನೆಯಲ್ಲಿ ಸಹಕರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಧನ್ಯವಾದ ಹೇಳಿದ್ದಾರೆ.
ಭಾರತದ ಪಂಜಾಬ್ ನಲ್ಲಿನರ ಡೇರಾ ಬಾಬಾ ನಾನಕ್ ಧಾರ್ಮಿಕ ಸ್ಥಳ ಹಾಗೂ ಪಾಕಿಸ್ತಾನದ ಪಂಜಾಬ್ನ ನರೋವಲ್ ಜಿಲ್ಲೆಯಲ್ಲಿರುವ ಕರ್ತಾರ್ ಸಾಹಿಬ್ ಎಂದೇ ಕರೆಯಲ್ಪಡುವ ದರ್ಬಾರ್ ಸಾಹಿಬ್ ನಡುವೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ್ ಕಾರಿಡಾರ್ ಮೂಲಕ ತೆರಳಲಿರುವ 550ಕ್ಕೂ ಹೆಚ್ಚು ಮಂದಿಯಿರುವ ತೀರ್ಥಯಾತ್ರಿಗಳ ಪ್ರಥಮ ತಂಡದ ಯಾತ್ರೆಗೆ ಪ್ರಧಾನಿ ಚಾಲನೆ ನೀಡಿದರು.
"ಗುರು ನಾನಕ್ ಅವರ 550ನೇ ಜನ್ಮದಿನಾಚರಣೆಗೆ ಮುನ್ನ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆ ತುಂಬಾ ಖುಷಿ ನೀಡಿದೆ. ಇಂದು ಇದನ್ನು ದೇಶಕ್ಕೆ ಸಮರ್ಪಿಸುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ. ಕರಸೇವೆ ಸಂದರ್ಭ ನಿಮ್ಮಲ್ಲಿದ್ದ ಧನ್ಯತಾ ಭಾವವೇ ಇಂದು ನನ್ನಲ್ಲಿದೆ. ಇಡೀ ದೇಶ ಹಾಗೂ ವಿಶ್ವದಾದ್ಯಂತವಿರುವ ಸಿಖ್ ಸೋದರ ಸೋದರಿಯರಿಗೂ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಪ್ರಧಾನಿ ಹೇಳಿದರು.