ಇನ್ನು ಮುಂದೆ ರಾಮ ಮಂದಿರ ಬಿಟ್ಟು ನೈಜ ಸಮಸ್ಯೆಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ: ಉಮಾ ಭಾರತಿ
ಹೊಸದಿಲ್ಲಿ: "ಇನ್ನು ಮುಂದೆ ಚುನಾವಣೆಗಳನ್ನು ರಾಮ ಮಂದಿರ ವಿಚಾರ ಮುಂದಿಟ್ಟುಕೊಂಡು ಎದುರಿಸಲಾಗುವುದಿಲ್ಲ. ಬದಲಾಗಿ ಇನ್ನು ಮುಂದೆ ವಸತಿ, ಆಹಾರ, ಶಿಕ್ಷಣ ಮುಂತಾದ ನಿಜವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸಲಾಗುವುದು'' ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅಯೋಧ್ಯೆ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ.
``ಈ ತೀರ್ಪು ಭಾರತದ ರಾಜಕಾರಣಕ್ಕೆ ಹೊಸ ದಿಕ್ಕು ನೀಡುವುದು, ಈ ಉತ್ತಮ ಮತ್ತು ನಿಷ್ಪಕ್ಷಪಾತ ತೀರ್ಪನ್ನು ಸ್ವಾಗತಿಸುತ್ತೇನೆ, ಇಡೀ ದೇಶ ಈ ತೀರ್ಪನ್ನು ಸ್ವಾಗತಿಸುವುದನ್ನು ನೋಡಿ ಖುಷಿಯಾಗುತ್ತದೆ,'' ಎಂದು ಹೇಳಿದರು.
``ನಾನು ಅಯೋಧ್ಯೆಯ ರಸ್ತೆಗಳಲ್ಲಿದ್ದಾಗ ಎಲ್ಲಿ ನನ್ನನ್ನು ಗುಂಡಿಕ್ಕಿ ಸಾಯಿಸಲಾಗುವುದೋ ಎಂದು ಹಿಂದೆ ಅನಿಸಿತ್ತು. ಇದೀಗ ಭಾವಪರವಶಳಾಗಿದ್ದೇನೆ'' ಎಂದು ಹೇಳಿದ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಅಯೋಧ್ಯೆ ಆಂದೋಲನದಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಪಾತ್ರವನ್ನು ಹೊಗಳಿದ ಉಮಾ ಭಾರತಿ 'ಅಡ್ವಾಣೀಜಿ ನನ್ನ ನಾಯಕ, ಅವರು ನಕಲಿ ಜಾತ್ಯತೀತತೆಯನ್ನು ಬಯಲುಗೊಳಿಸಿದರು' ಎಂದು ಹೇಳಿದರು.
ಅಡ್ವಾಣಿಯವರನ್ನು ಭೇಟಿಯಾದ ಉಮಾ ಭಾರತಿ ``ಬಿಜೆಪಿ ಹಾಗೂ ಅಯೋಧ್ಯೆ ಅಭಿಯಾನವನ್ನು ಈ ಹಂತಕ್ಕೆ ತರುವಲ್ಲಿ ಅವರು ಶ್ರಮಿಸಿದ್ದರು'' ಎಂದರು.