ಅಯೋಧ್ಯೆ ತೀರ್ಪು: ವಾರಣಾಸಿ, ಮಥುರಾ ಮಸೀದಿಗಳ ವಿಚಾರವನ್ನು ಆರೆಸ್ಸೆಸ್ ಎತ್ತುವುದಿಲ್ಲ ಎಂದ ಮೋಹನ್ ಭಾಗವತ್
ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅದೇ ಸಮಯ ವಾರಣಾಸಿಯ ಗ್ಯಾನ್ವಪಿ ಮಸೀದಿ ಹಾಗೂ ಮಥುರಾದ ಶಾಹಿ ಈದ್ಗಾ ಮೇಲಿನ ಹಕ್ಕು ಸ್ಥಾಪಿಸಲು ಯತ್ನಿಸುತ್ತಿರುವ ಹಿಂದು ಸಂತರು ಹಾಗೂ ಬಲಪಂಥೀಯ ಗುಂಪುಗಳ ಬೆಂಬಲಕ್ಕೆ ಆರೆಸ್ಸೆಸ್ ನಿಲ್ಲುವ ಸಾಧ್ಯತೆಯಿಲ್ಲ ಎಂದಿದ್ದಾರೆ.
ಕಾಶಿ ಹಾಗೂ ಮಥುರಾ ವಿಚಾರದಲ್ಲಿ ಆರೆಸ್ಸೆಸ್ ಮುಂದಡಿಯಿಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘ ಇನ್ನು ಮುಂದೆ ಯಾವುದೇ ಆಂದೋಲನದಲ್ಲಿ ಭಾಗಿಯಾಗುವ ಬದಲು ತನ್ನ ವರ್ಚಸ್ಸು ವೃದ್ಧಿಸಲು ಕೆಲಸ ಮಾಡಲಿದೆ ಎಂದರು.
ಅಯ್ಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಸ್ಲಿಂ ಸಮುದಾಯಕ್ಕೆ ಯಾವುದೇ ಪ್ರತ್ಯೇಕ ಸಂದೇಶ ನೀಡುವುದಿಲ್ಲ ಎಂದ ಅವರು "ಹಿಂದುಗಳು ಮತ್ತು ಮುಸಲ್ಮಾನರು ಭಾರತದ ನಾಗರಿಕರು'' ಎಂದರು.
"ಅಯೋಧ್ಯೆಯಲ್ಲಿ ಮಸೀದಿ ಎಲ್ಲಿ ನಿರ್ಮಿಸಬೇಕೆಂಬುದನ್ನು ಕೇಂದ್ರ ಸರಕಾರ ನಿರ್ಧರಿಸಲಿದೆ, ಎಲ್ಲಾ ದ್ವೇಷದ ಭಾವನೆಗಳನ್ನು ಬದಿಗಿಡುವ ಸಮಯ ಬಂದಿದೆ, ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು'' ಎಂದು ಭಾಗವತ್ ಹೇಳಿದರು.