ಅಯೋಧ್ಯೆ ವಿವಾದದ ತೀರ್ಪಿನ ಬಗ್ಗೆ ಗಂಭೀರ್ ಪ್ರತಿಕ್ರಿಯೆ
ಹೊಸದಿಲ್ಲಿ,ನ.10: ಅಯೋಧ್ಯೆ ವಿವಾದ ಕುರಿತಾಗಿ ಸುಪ್ರೀಂಕೋರ್ಟ್ ಶನಿವಾರ ನೀಡಿದ ತೀರ್ಪು ಸಮತೋಲನದ ನಿರ್ಧಾರವೆಂದು ಮಾಜಿ ಕ್ರಿಕೆಟಿಗ ಹಾಗೂ ಪೂರ್ವ ದಿಲ್ಲಿ ಲೋಕಸಭಾ ಸದಸ್ಯ ಗೌತಮ್ ಗಂಭೀರ್ ಬಣ್ಣಿಸಿದ್ದಾರೆ. ಇನ್ನು ಮುಂದೆ ದೇಶದ ಜನತೆ ಒಗ್ಗೂಡಿ, ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಅವರು ಕರೆ ನೀಡಿದ್ದಾರೆ.
‘‘ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ದೀರ್ಘ ಸಮಯದಿಂದ ಈ ವಿವಾದವು ಇತ್ಯರ್ಥವಾಗದೆ ನನೆಗುದಿಯಲ್ಲಿತ್ತು. ಈಗ ನಾವು ಮುಂದೆ ದೇಶವನ್ನು ಹೇಗೆ ಮುನ್ನಡೆಸಲು ಬಯಸುತ್ತೇವೆ ಎಂಬುದನ್ನು ನೋಡಬೇಕಾಗಿದೆ’’ ಎಂದು ಗಾಂಭೀರ್ ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ಇದೊಂದು ಸಂತುಲಿತವಾದ ನಿರ್ಧಾರವಾಗಿದೆ. ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿದೆ ಹಾಗೂ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮ್ ಸಮುದಾಯಕ್ಕೆ ಐದು ಎಕರೆಯ ಜಮೀನು ನೀಡಲಾಗುವುದು. ನಾವು ಯಾವುದೇ ವಿಷಯವನ್ನು ಬಚ್ಚಿಡುವುದಿಲ್ಲ, ಆದರೆ ಅವುಗಳನ್ನು ಬಗೆಹರಿಸುತ್ತೇವೆ. ಇದುವೇ ಬಿಜೆಪಿಯ ಉತ್ತಮ ಗುಣವಾಗಿದೆ. ಒಂದು ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಇದೇ ರೀತಿಯ ಮುತುವರ್ಜಿಯನ್ನು ತೋರಿಸಿದ್ದಲ್ಲ್ಲಿ, ಈ ವಿವಾದವು ಬಹಳ ಸಮಯದಷ್ಟು ಹಿಂದೆಯೇ ಇತ್ಯರ್ಥಗೊಳ್ಳುತ್ತಿತ್ತು” ಎಂದವರು ಹೇಳಿದ್ದಾರೆ.