ಪ್ರಮುಖ ಮಣಿಪುರ ಬಂಡುಕೋರ ಮುಖಂಡರ ಬಿಡುಗಡೆ
ಗುವಾಹಟಿ, ನ.10: ನಾಗಾಲ್ಯಾಂಡ್ನ ಬಂಡುಕೋರ ತಂಡಗಳೊಂದಿಗೆ ಶಾಂತಿ ಒಪ್ಪಂದ ಏರ್ಪಡಲಿರುವ ಹಿನ್ನೆಲೆಯಲ್ಲಿ ಮಣಿಪುರ ಮೂಲದ ಬಂಡುಕೋರ ಸಂಘಟನೆ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್(ಯುಎನ್ಎಲ್ಎಫ್)ನ ಮುಖ್ಯಸ್ಥ ರಾಜ್ಕುಮಾರ್ ಮೆಘೆನ್ನನ್ನು ಗುವಾಹಟಿ ಸೆಂಟ್ರಲ್ ಜೈಲಿನಿಂದ ಶನಿವಾರ ಬಿಡುಗಡೆಗೊಳಿಸಲಾಗಿದೆ. ಮೆಘೆನ್ ಸೋಮವಾರ ಇಂಫಾಲಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 2010ರಲ್ಲಿ ಮೆಘೆನ್ನನ್ನು ಬಾಂಗ್ಲಾದೇಶದ ಏಜೆಂಟರು ಅಪಹರಿಸಿದ್ದರು ಎನ್ನಲಾಗಿದೆ. ಬಳಿಕ ಎನ್ಐಎ ಆರೋಪಪಟ್ಟಿಗೆ ಸಂಬಂಧಿಸಿ ಆತನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ ಬಳಿಕ ಮೆಘೆನ್ ಹಾಗೂ ಇತರ 18 ಮಂದಿಗೆ 10 ವರ್ಷ ಸೆರೆವಾಸ ವಿಧಿಸಲಾಗಿತ್ತು.
ಗುವಾಹಟಿ ಜೈಲಿನಲ್ಲಿ ವಾಚನಾಲಯ, ಸಂಗೀತ ಪಾಠಶಾಲೆ, ಗಾರ್ಡನ್ ರಚನೆ ಮುಂತಾದ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರಣ ಮೆಘೆನ್ ಶಿಕ್ಷೆಯನ್ನು ಕಡಿತಗೊಳಿಸಲಾಗಿತ್ತು. ಇದೀಗ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಮೆಘೆನ್ರನ್ನು ಬಳಸಿಕೊಳ್ಳುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ ಎನ್ನಲಾಗಿದೆ.