ಯುವತಿಗೆ ಚೂರಿ ಇರಿದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಬೆಂಗಳೂರು, ನ.11: ಪ್ರೇಮಿಯೊಬ್ಬ ಪ್ರೇಯಸಿಗೆ ಚಾಕುವಿನಿಂದ ಇರಿದು, ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಟಾಲ್ಡ್ರಾನ್ ಟೆನ್ವಿ ಹಾಗೂ ಅಂತ್ರಾಜ್ ಜೈಸ್ವಾಲ್ ಪರಸ್ಪರ ಪ್ರೀತಿಸುತ್ತಿದ್ದರು. ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಜಗಳವಾಡಿಕೊಂಡಿದ್ದರು. ಇದಾದ ಬಳಿಕ ಸುಮ್ಮನಾಗದ ಜೈಸ್ವಾಲ್ ಕೋಪಗೊಂಡು ಚಾಕು ತೆಗೆದುಕೊಂಡು ಹೋಗಿ ಪ್ರೇಯಸಿಗೆ ಇರಿದಿದ್ದಾನೆ. ಅನಂತರ ತಾನೂ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ನಾಗರಬಾವಿಯ ವಿದ್ಯಾಗಿರಿ ಲೇಔಟ್ ಬಳಿ ಘಟನೆ ನಡೆದಿದ್ದು, ಅಲ್ಲಿನ ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಇವರಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.