ಶಿವಸೇನಾಗೆ ಹೆಚ್ಚು ಸ್ಥಾನ ಬರಲು ಪ್ರಧಾನಿ ಮೋದಿ ಕಾರಣ: ಪ್ರಹ್ಲಾದ್ ಜೋಶಿ
![ಶಿವಸೇನಾಗೆ ಹೆಚ್ಚು ಸ್ಥಾನ ಬರಲು ಪ್ರಧಾನಿ ಮೋದಿ ಕಾರಣ: ಪ್ರಹ್ಲಾದ್ ಜೋಶಿ ಶಿವಸೇನಾಗೆ ಹೆಚ್ಚು ಸ್ಥಾನ ಬರಲು ಪ್ರಧಾನಿ ಮೋದಿ ಕಾರಣ: ಪ್ರಹ್ಲಾದ್ ಜೋಶಿ](https://www.varthabharati.in/sites/default/files/images/articles/2019/11/11/218840-1573487796.jpg)
ಹುಬ್ಬಳ್ಳಿ, ನ. 11: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾಗೆ 56 ಸ್ಥಾನಗಳು ಬರುಲು ಪ್ರಧಾನಿ ನರೇಂದ್ರ ಮೋದಿಯವರು ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಸೇನಾವು ಅಪ್ರಾಯೋಗಿಕ ಮತ್ತು ಅಸಾಧ್ಯವಾದ ಷರತ್ತುಗಳನ್ನು ಮುಂದಿಟ್ಟಿದ್ದರಿಂದ ಬಿಜೆಪಿಯು ಅತಿದೊಡ್ಡ ಪಕ್ಷವಾಗಿದ್ದರೂ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಿಂದ ದೂರ ಉಳಿಯಬೇಕಾಗಿದೆ ಎಂದರು.
ಶಿವಸೇನಾ ಜತೆ ಉತ್ತಮ ಬಾಂಧವ್ಯ ಇರುವಂತೆ ನೋಡಿಕೊಳ್ಳಲು ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದೆವು. ಆದರೆ, ಅವರು ಅಪ್ರಾಯೋಗಿಕ ಷರತ್ತುಗಳನ್ನು ಮುಂದಿಟ್ಟರು. ಮಹಾರಾಷ್ಟ್ರ ಸರಕಾರ ರಚನೆಗೆ ಸಂಬಂಧಿಸಿದ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಎನ್ಡಿಎ ಮೈತ್ರಿಕೂಟದಿಂದ ಶಿವಸೇನಾ ಹೊರಬಂದಿದೆ ಎಂದರು.
ಈ ಬೆಳೆವಣಿಗೆಗಳ ಮಧ್ಯೆ ಶಿವಸೇನಾ ಸಂಸದ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್ ಸಾವಂತ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಹೊರಬಂದಿದ್ದಾರೆಂಬುದು ಗಮನಾರ್ಹ ಬೆಳವಣಿಗೆಯಾಗಿದೆ.