ಸಾಲ ಮರು ಪಾವತಿಸಲು ಹೇಳಿದ ಬ್ಯಾಂಕ್ ವ್ಯವಸ್ಥಾಪಕನ ಮೇಲೆ ಹಲ್ಲೆ
ಗಾಯಾಳು ಆಸ್ಪತ್ರೆಗೆ ದಾಖಲು
ಮಡಿಕೇರಿ, ನ.11: ಸಾಲ ಮರು ಪಾವತಿಸುವಂತೆ ಹೇಳಿದ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ವ್ಯಕ್ತಿಯೊಬ್ಬರು ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಸಮೀಪದ ಕಡಗದಾಳು ವಿಎಸ್ಎಸ್ಎನ್ ನಲ್ಲಿ ನಡೆದಿದೆ.
ಕಡಗದಾಳು ನಿವಾಸಿ ಎ.ಸಾಬು ಎಂಬಾತನೇ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಘಟನೆ ನಡೆದ ಬಳಿಕ ತಲೆ ಮರೆಸಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಲ್ಲೆ ಆರೋಪಿ ಸಾಬು ಎಂಬಾತ ಕಡಗದಾಳು, ಇಬ್ನಿಳವಾಡಿ ವಿಎಸ್ಎಸ್ಎನ್ ನಿಂದ ಸಾಲ ಪಡೆದಿದ್ದು, ಅದನ್ನು ಮರು ಪಾವತಿಸಿರಲಿಲ್ಲ. ಸಾಲ ತೀರಿಸುವಂತೆ ತಿಳಿ ಹೇಳಿದ್ದರೂ, ಸಾಲ ಮರು ಪಾವತಿಗೆ ಮುಂದಾಗಿರಲಿಲ್ಲ. ಈ ನಡುವೆ ಮತ್ತೆ ಬ್ಯಾಂಕಿನಿಂದ ಸಾಲ ಪಡೆಯಲು ಸಾಬು ಬ್ಯಾಂಕಿಗೆ ತೆರಳಿದಾಗ ಬ್ಯಾಂಕಿನ ಸಿಬ್ಬಂದಿಗಳು ಖಾಲಿ ಚೆಕ್ನ್ನು ನೀಡುವಂತೆ ಸಾಬುಗೆ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಸಾಬು, ಬ್ಯಾಂಕಿನ ಕಟ್ಟಡದ ಪಕ್ಕದಲ್ಲಿದ್ದ ಹತ್ಯಾರು ವಿಭಾಗಕ್ಕೆ ನುಗ್ಗಿ, ಅಲ್ಲಿದ್ದ ಕತ್ತಿಯನ್ನು ತಂದು ವ್ಯವಸ್ಥಾಪಕ ಲೋಕೇಶ್ ಅವರ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಬು ಘಟನೆ ಬಳಿಕ ಕತ್ತಿ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ.
ಕುಸಿದು ಬಿದ್ದ ಗಾಯಾಳು ಲೋಕೇಶ್ ಅವರನ್ನು ಬ್ಯಾಂಕಿನ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.