ಅನಧಿಕೃತ ಮರಳು ದಾಸ್ತಾನು ಕಂಡುಬಂದಲ್ಲಿ ಕಠಿಣ ಕ್ರಮ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ನ.11: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್ಝಡ್ ಪ್ರದೇಶ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಡ್ಯಾಮ್ನಲ್ಲಿ ಹೂಳೆತ್ತಿ, ದೊರೆತ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ.
ಪಿಡಬ್ಲುಡಿ ಗುತ್ತಿಗೆದಾರರು, ಸಾರ್ವಜನಿಕರು ಕಾಮಗಾರಿಗಳ ಅಗತ್ಯತೆಗಳಿ ಗನುಸಾರವಾಗಿ ಮರಳನ್ನು ಪಡೆಯಬಹುದಾಗಿದೆ. ಇದನ್ನು ಹೊರತುಪಡಿಸಿ ಅನಧಿಕೃತ ಮರಳುಗಾರಿಕೆ/ಸಾಗಾಣಿಕೆ/ ದಾಸ್ತಾನು ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ.
ಅನಧಿಕೃತ ಮರಳುಗಾರಿಕೆ/ಸಾಗಾಣಿಕೆ/ ದಾಸ್ತಾನುಗಳ ವಿರುದ್ಧ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಾರಂಭವಾದ ನಂತರ ನ್ಯಾಯಾಲಯದಲ್ಲಿ ಎಂಎಂಡಿಆರ್ ಆ್ಯಕ್ಟ್ ಅಡಿಯಲ್ಲಿ ಹಾಗೂ ಕರ್ನಾಟಕ ಉಪಖನಿಜ ರಿಯಾಯತಿ ನಿಯಮಾವಳಿ 1994ರನ್ವಯ 23 ಖಾಸಗಿ ದೂರು ದಾಖಲಿಸಲಾಗಿದೆ.
ಈಗಾಗಲೇ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಂಬಂಧಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅದಾಗ್ಯೂ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ ಅಥವಾ ದಾಸ್ತಾನು ಮಾಡು ವುದು ಪುನರಾವರ್ತಿತವಾದಲ್ಲಿ ನಿಯಮಾನುಸಾರ ಗೂಂಡಾ ಕಾಯ್ದೆಯಡಿ ಯಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.