ನನಗೆ ಕುರ್ ಆನ್ ಓದುವ ಕುತೂಹಲವಿತ್ತು: ಗೋವಾ ಸಿಎಂ ಸಾವಂತ್
ಪಣಜಿ, ನ. 11: ಕುರ್ ಆನ್ ಓದುವ ಕುತೂಹಲವಿತ್ತು. ಅದರಲ್ಲಿ ಏನು ಬರೆದಿದೆ ಎಂದು ತಿಳಿಯಲು ಬಯಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ರವಿವಾರ ರಾತ್ರಿ ಮೀಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾವಂತ್, ಎಲ್ಲ ಧರ್ಮಗಳು ಸಮಾನತೆ ಪ್ರತಿಪಾದಿಸಿದೆ ಹಾಗೂ ತನ್ನ ಸರಕಾರ ನಂಬಿಕೆಗಳ ನಡುವೆ ಯಾವುದೇ ತಾರತಮ್ಯ ಮಾಡದು ಎಂದರು.
‘‘ಕುರ್ ಆನ್ ಉರ್ದುವಿನಲ್ಲಿ ಇದೆ. ನಾನು ಹಿಂದಿ ಪ್ರತಿ ಕೇಳಿದ್ದೆ ಹಾಗೂ ಓದಲು ಆರಂಭಿಸಿದ್ದೆ. ಬೈಬಲ್ ಇಂಗ್ಲಿಷನ್ಲ್ಲಿ ಇದೆ. ಭಗವದ್ಗೀತೆ ಇಂಗ್ಲಿಷ್, ಹಿಂದಿ ಹಾಗೂ ಮರಾಠಿಯಲ್ಲಿ ಇದೆ ಕುರ್ ಆನ್ ನಲ್ಲಿ ಏನು ಬರೆದಿದೆ ಎಂದು ತಿಳಿಯಲು ನಾನು ಬಯಸಿದ್ದೆ. ಅದನ್ನು ಓದುವ ಕುತೂಹಲ ಇತ್ತು’’ ಎಂದು ಸಾವಂತ್ ಹೇಳಿದ್ದಾರೆ.
‘‘ನಾನು ಇದುವರೆಗೆ ಕುರ್ ಆನ್ ಅನ್ನು ಸಂಪೂರ್ಣವಾಗಿ ಓದಿಲ್ಲ. ಅದರ ಕೆಲವು ಭಾಗಗಳನ್ನು ಮಾತ್ರ ಓದಿದ್ದೇನೆ. ಅದೇ ರೀತಿ ಬೈಬಲ್ನ ಕೆಲವು ಭಾಗಗಳನ್ನು ಮಾತ್ರ ಓದಿದ್ದೇನೆ. ಭಗವದ್ಗೀತೆಯನ್ನು ಈಗಾಗಲೇ ಓದಿದ್ದೇನೆ. ಬೈಬಲ್ ಅನ್ನು ಸಂಪೂರ್ಣವಾಗಿ ಓದಲು ಪ್ರಯತ್ನಿಸುತ್ತಿದ್ದೇನೆ’’ ಎಂದು ಅವರು ಹೇಳಿದರು.
‘‘ಕುರ್ ಆನ್ ನಲ್ಲಿ ಮಾನವರನ್ನು ಎಲ್ಲ ಜೀವಿಗಳಿಗಿಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಆದರೆ, ಕುರ್ ಆನ್ ಆಗಲಿ, ಬೈಬಲ್ ಆಗಲಿ, ಭಗವದ್ಗೀತೆಯಾಗಲಿ ಇನ್ನೊಂದು ಧರ್ಮವನ್ನು ಅವಮಾನಿಸು ಎಂದು ಹೇಳುವುದಿಲ್ಲ. ನಮ್ಮ ಧರ್ಮ ಶ್ರೇಷ್ಟವಾಗಿದೆ ಎಂದು ಕುರ್ ಆನ್ ಹೇಳುತ್ತದೆ. ಆದರೆ, ಇತರ ಧರ್ಮಗಳಿಗೆ ಗೌರವ ನೀಡಬೇಕು ಎಂದು ಕೂಡ ಅದು ಪ್ರತಿಪಾದಿಸುತ್ತದೆ’’ ಎಂದು ಸಾವಂತ್ ಹೇಳಿದರು.