ಅಶೋಕ್ ಲಾವಸ ಪುತ್ರ ನಿರ್ದೇಶಕನಾಗಿರುವ ಸಂಸ್ಥೆ ವಿರುದ್ಧ ಈ.ಡಿ. ತನಿಖೆ
ಅಮಿತ್ ಶಾ, ಮೋದಿಗೆ ಕ್ಲೀನ್ ಚಿಟ್ ಬಗ್ಗೆ ಅಸಮ್ಮತಿ ಸೂಚಿಸಿದ್ದ ಚುನಾವಣಾ ಆಯುಕ್ತ
ಹೊಸದಿಲ್ಲಿ, ನ.12: ಲೋಕಸಭಾ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ್ದ ಚುನಾವಣಾ ಆಯೋಗದ ನಿರ್ಧಾರಗಳಿಗೆ ಅಸಮ್ಮತಿ ಸೂಚಿಸಿದ್ದ ಚುನಾವಣಾ ಆಯುಕ್ತ ಅಶೋಕ್ ಲಾವಸ ಅವರ ಪುತ್ರ ಅಬೀರ್ ಲಾವಸ ಹಾಗೂ ಅವರು ನಿರ್ದೇಶಕರಾಗಿರುವ ಕಂಪೆನಿ ವಿದೇಶಿ ವಿನಿಮಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಅಬೀರ್ ಅವರು ನಿರ್ದೇಶಕರಾಗಿರುವ ನರಿಶ್ ಆರ್ಗಾನಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಾರ್ಚ್ 2019ರಲ್ಲಿ ಮಾರಿಷಸ್ ಮೂಲದ ಸಾಮಾ ಕ್ಯಾಪಿಟಲ್ ಸಂಸ್ಥೆಯಿಂದ ಪಡೆದ 7.25 ಕೋಟಿ ರೂ. ಬಂಡವಾಳ ಕುರಿತಂತೆ ಈ ತನಿಖೆ ನಡೆಯುತ್ತಿದೆ.
ಸಾಮಾ ಕ್ಯಾಪಿಟಲ್ ಭಾರತದ ಹಲವಾರು ಸ್ಟಾರ್ಟ್-ಅಪ್ ಸಂಸ್ಥೆಗಳಾದ ಪೇಟಿಎಂ, ಚಾಯಿ ಪಾಯಿಂಟ್, ವಿಸ್ತಾರ್, ಸ್ನ್ಯಾಪ್ ಡೀಲ್ ಹಾಗೂ ಎಸ್ಕೆಎಸ್ ಮೈಕ್ರೋಫೈನಾನ್ಸ್ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ಅಬೀರ್ ಲಾವಸ ನರಿಶ್ ಆರ್ಗಾನಿಕ್ ಕಂಪೆನಿಯಲ್ಲಿ ನವೆಂಬರ್ 2017ರಿಂದ ನಿರ್ದೇಶಕರಾಗಿದ್ದಾರೆ.
ಕಳೆದ ವಾರ ಜಾರಿ ನಿರ್ದೇಶನಾಲಯದೆದುರು ಹಾಜರಾಗುವಂತೆ ಅಬೀರ್ ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಅಂತೆಯೇ ಕಳೆದ ವಾರ ಅವರು ಹಾಜರಾಗಿದ್ದು ಇದೀಗ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಒಂದು ವಾರ ಕಾಲಾವಕಾಶ ನೀಡಿದೆ. ಸಾಮಾ ಕ್ಯಾಪಿಟಲ್ ನಿರ್ದೇಶಕರಿಗೂ ಸಮನ್ಸ್ ಕಳುಹಿಸಲಾಗಿದೆ.