ಮುಖ್ಯಮಂತ್ರಿ ಹುದ್ದೆ ಹಂಚಿಕೆಗೆ ಎನ್ಸಿಪಿ ಆಗ್ರಹ, ಉಪಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಬೇಡಿಕೆ
ಮುಂಬೈ, ಅ. 31: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ನಡುವೆ ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಪ್ರಫುಲ್ ಪಟೇಲ್ ಹಾಗೂ ಕೆ.ಸಿ. ವೇಣುಗೋಪಾಲ್ ಮುಂಬೈಗೆ ದೌಡಾಯಿಸಿದ್ದಾರೆ ಹಾಗೂ ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಇತರ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ ಎನ್ಸಿಪಿ ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗಿನ ಮೈತ್ರಿ ಸರಕಾರದಲ್ಲಿ 44 ಶಾಸಕರನ್ನು ಒಳಗೊಂಡ ಕಾಂಗ್ರೆಸ್ ಭಾಗವಾಗಬೇಕು ಎಂದು ಸೂಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಐದು ವರ್ಷಗಳ ಆಡಳಿತದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಬೇಡಿಕೆ ಇರಿಸಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷಗಳ ಕಾಲ ಎನ್ಸಿಪಿ ಹಾಗೂ ಶಿವಸೇನೆ ಹಂಚಿಕೊಳ್ಳಬೇಕು ಎಂದು ಎನ್ಸಿಪಿ ಈಗಾಗಲೇ ಸೂಚಿಸಿದೆ. ಕಾಂಗ್ರೆಸ್ ಉಪ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಮುಂದಿಟ್ಟಿದೆ ಎಂದು ವರದಿಯಾಗಿದೆ. ಕಾಂಗ್ರೆಸ್ ಮಹಾರಾಷ್ಟ್ರ ಸರಕಾರದ ಭಾಗವಾಗಲಿದೆ ಎಂಬುದು ನಿರ್ಣಾಯಕ. ಇದರಿಂದ ರಾಜ್ಯದಲ್ಲಿ ಸ್ಥಿರ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶರದ್ ಪವಾರ್ರ ಎನ್ಸಿಪಿ ಹೇಳಿದೆ.
ಶಿವಸೇನೆ ಹಾಗೂ ಎನ್ಸಿಪಿಯೊಂದಿಗೆ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದರೆ ರಾಜ್ಯದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ತರಬೇಕು ಎಂದು ಎನ್ಸಿಪಿಯೊಂದಿಗಿನ ಮಾತುಕತೆಯ ಸಂದರ್ಭ ಕಾಂಗ್ರೆಸ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ.