ರಾಹುಲ್ ದ್ರಾವಿಡ್ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದ ವಿಚಾರಣೆ ಮುಕ್ತಾಯ
ಶೀಘ್ರವೇ ತೀರ್ಪು ಪ್ರಕಟ
ಹೊಸದಿಲ್ಲಿ, ನ.12: ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ವಿರುದ್ಧ ಕೇಳಿಬಂದಿರುವ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದ ವಿಚಾರಣೆ ಮಂಗಳವಾರ ಮುಕ್ತಾಯವಾಗಿದೆ.
ದ್ರಾವಿಡ್ರನ್ನು ವಿಚಾರಣೆ ನಡೆಸಿದ ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿ.ಕೆ.ಜೈನ್, ‘‘ವಿಚಾರಣೆ ಮುಗಿದಿದೆ. ಆದಷ್ಟು ಬೇಗನೆ ನನ್ನ ತೀರ್ಪನ್ನು ನೀವೆಲ್ಲಾ ನಿರೀಕ್ಷಿಸಬಹುದು’’ ಎಂದರು.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯರಾದ ಸಂಜೀವ್ ಗುಪ್ತಾ, ದ್ರಾವಿಡ್ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಹೊರಿಸಿ ದೂರು ನೀಡಿದ್ದರು. ಇದೀಗ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಯ ಮುಖ್ಯಸ್ಥರಾಗಿರುವ ದ್ರಾವಿಡ್ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಮಾಲಕತ್ವದ ಇಂಡಿಯಾ ಸಿಮೆಂಟ್ಸ್ ಸಮೂಹದಲ್ಲಿ ಉಪಾಧ್ಯಕ್ಷರಾಗಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ. ಬಿಸಿಸಿಸಿಐ ಸಂವಿಧಾನದ ಪ್ರಕಾರ ವ್ಯಕ್ತಿಯೊಬ್ಬ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಯಲ್ಲಿರಬಾರದು. 46ರ ಹರೆಯದ ಭಾರತದ ಮಾಜಿ ನಾಯಕ ದ್ರಾವಿಡ್ಗೆ ಸೆ.26ರಂದು ಮುಂಬೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಎಥಿಕ್ಸ್ ಅಧಿಕಾರಿಗಳು ಸೋಮವಾರ ದ್ರಾವಿಡ್ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಎನ್ಸಿಎ ಮುಖ್ಯಸ್ಥ ದ್ರಾವಿಡ್ರನ್ನು ಅವರ ವಕೀಲರು ಪ್ರತಿನಿಧಿಸಿದ್ದರು ಎಂದು ತಿಳಿದುಬಂದಿದೆ. ದ್ರಾವಿಡ್ ಎನ್ಸಿಎ ಮುಖ್ಯಸ್ಥನಾಗಿ ಆಯ್ಕೆಯಾಗುವ ಮೊದಲು ಭಾರತ ಎ ಹಾಗೂ ಅಂಡ್-19 ತಂಡಗಳ ಕೋಚ್ ಆಗಿದ್ದರು.