ಮೈಸೂರು: ಕೇಂದ್ರ ಸರ್ಕಾರದ ಆರ್ಥಿಕ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮೈಸೂರು, ನ,13: ಕಾಂಗ್ರೆಸ್ ನದು ಹೊಟ್ಟೆಗೆ ಹಿಟ್ಟನ್ನು ನೀಡುವ ಸಂಸ್ಕೃತಿಯಾದರೆ, ಬಿಜೆಪಿಯವರದು ಜುಟ್ಟಿಗೆ ಮಲ್ಲಿಗೆ ಹೂವು ನೀಡುವ ಸಂಸ್ಕೃತಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಗಾಂಧಿ ವೃತ್ತದ ಬಳಿ ಬುಧವಾರ ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ಜನವಿರೋಧಿ ನೀತಿ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನಾವು ಅಭಿವೃದ್ಧಿ ಆಧಾರದಲ್ಲಿ ಮತ ಕೇಳಿದರೆ, ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯುವ ಸಮುದಾಯಕ್ಕೆ ಉದ್ಯೋಗ ನೀಡುವ ಸಲುವಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಬಡವರಿಗೆ 3 ರೂ.ಗೆ ಅಕ್ಕಿ, ಗೋಧಿ ನೀಡುವ ಆಹಾರ ಭದ್ರತೆ, ರೈತರ 75 ಸಾವಿರ ಕೋಟಿ ರೂ. ಸಾಲಮನ್ನಾ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖಾಂತರ ಸಾವಿರ ಜನ ವಾಸಿಸುವ ಹಳ್ಳಿಗಳಿಗೆ ಒಬ್ಬ ಆಶಾ ಕಾರ್ಯಕರ್ತರ ನೇಮಕ, ಕಡ್ಡಾಯ ಶಿಕ್ಷಣದಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ, ಜಿಎಸ್ಟಿ, ಅಧಿಕ ಟ್ಯಾಕ್ಸ್, ಜಮ್ಮು ಕಾಶ್ಮೀರ ವಿಚಾರವಾಗಿ 370 ವಿಧಿ ಸೇರಿದಂತೆ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದರು.