ಮಾಲ್ ನ ಶೌಚ ಗುಂಡಿಗೆ ಇಳಿದ ಸ್ವಚ್ಛತಾ ಕಾರ್ಮಿಕ ಉಸಿರುಗಟ್ಟಿ ಮೃತ್ಯು
ಫೋಟೋಗೆ ಪೋಸ್ ನೀಡಲು ಸುರಕ್ಷತಾ ಸಾಧನ ನೀಡಿದ್ದ ಗುತ್ತಿಗೆದಾರ: ಆರೋಪ
ಚೆನ್ನೈ, ನ.13: ನಗರದ ಎಕ್ಸ್ ಪ್ರೆಸ್ ಎವೆನ್ಯೂ ಮಾಲ್ ನ ಶೌಚ ಗುಂಡಿ ಸ್ವಚ್ಛಗೊಳಿಸಲು ಹೋಗಿದ್ದ ಒಬ್ಬ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ. ಇದರ ಬೆನ್ನಿಗೆ ಮೃತ ಯುವಕನ ಸೋದರ ಆಘಾತಕಾರಿ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾನೆ.
ಕಾರ್ಮಿಕರು ಶೌಚ ಗುಂಡಿಗೆ ಪ್ರವೇಶಿಸುವ ಮುನ್ನ ಮಾಲ್ ನವರು ಒದಗಿಸಿದ್ದ ಸುರಕ್ಷತಾ ಸಾಧನಗಳಾದ ಫೇಸ್ ಮಾಸ್ಕ್, ಕೈಗವಸು ಹಾಗೂ ಬೂಟುಗಳನ್ನು ಅವರು ಧರಿಸುವಂತೆ ಮಾಡಿ ಫೋಟೋ ಕೂಡ ತೆಗೆಸಿದ್ದ ಗುತ್ತಿಗೆದಾರ ನಂತರ ಅವುಗಳನ್ನು ಕಳಚಿ ಶೌಚಗುಂಡಿ ಪ್ರವೇಶಿಸುವಂತೆ ಹೇಳಿದ್ದ ಎಂದು ಮೃತ ಅರುಣ್ ಕುಮಾರ್ ಸೋದರ ರಂಜಿತ್ ಆರೋಪಿಸಿದ್ದಾನೆ.
"ನಾವು ಬಳಸಿದರೆ ಅವುಗಳು ನಿಷ್ಪ್ರಯೋಜಕವಾಗುತ್ತವೆ'' ಎಂದೂ ಆತ ಹೇಳಿದ್ದ ಎಂದು ರಂಜಿತ್ ದೂರಿದ್ದಾನೆ.
ಶೌಚ ಗುಂಡಿಯನ್ನು ಸ್ವಚ್ಛಗೊಳಿಸಲು ಅರುಣ್, ಆತನ ಸೋದರ ರಂಜಿತ್ ಹಾಗೂ ಇತರ ಮೂವರನ್ನು ನಿಯೋಜಿಸಲಾಗಿತ್ತು.ಮೊದಲು ಪ್ರವೇಶಿಸಿದ ರಂಜಿತ್ ಅಲ್ಲಿನ ವಿಷಗಾಳಿಗೆ ಕುಸಿದು ಬಿದ್ದಾಗ ಆತನ ರಕ್ಷಣೆಗೆ ಧಾವಿಸಿದ ಅರುಣ್ ಆತನನ್ನು ಮೇಲಕ್ಕೆತ್ತಿದನಾದರೂ ತಾನು ಹೊರಬರಲಾರದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.