ಆತಿಶ್ ತಸೀರ್ ಪ್ರಕರಣ: ನಿರ್ಧಾರ ಮರುಪರಿಶೀಲನೆಗೆ 260 ಲೇಖಕರ ಆಗ್ರಹ
ಹೊಸದಿಲ್ಲಿ: ಖ್ಯಾತ ಲೇಖಕ ಆತಿಶ್ ತಸೀರ್ ಅವರ ಭಾರತದ ಸಾಗರೋತ್ತರ ಪ್ರಜೆ (ಒಸಿಐ) ಸ್ಥಾನಮಾನವನ್ನು ರದ್ದುಪಡಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಓರನ್ ಪಮುಖ್ ಮತ್ತು ಜಾನ್ ಮ್ಯಾಕ್ಸ್ವೆಲ್ ಕೋಟ್ಝಿ, ಬೂಕರ್ ವಿಜೇತೆ ಮಾರ್ಗರೇಟ್ ಅತ್ವೂದ್, ಸಲ್ಮನ್ ರಶ್ದಿ ಮತ್ತು ಇಯಾನ್ ಮೆಕ್ಇವಾನ್ ಸೇರಿದಂತೆ 260ಕ್ಕೂ ಹೆಚ್ಚು ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ಕಲಾವಿದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರಕ್ಕೆ ಸಹಿ ಮಾಡಿದವರಲ್ಲಿ ಚಿಮಾಮಂದಿ ಅದಿಚಿ, ಜೊನಾಥನ್ ಫ್ರನ್ಝೆನ್, ಝದಿ ಸ್ಮಿತ್, ಎಲಿಫ್ ಶಫಾಕ್, ಸ್ಟೀವನ್ ಪಿಂಕೆರ್, ಸರ್ ಹರೋಲ್ಡ್ ಇವಾನ್ಸ್, ಮಿಯಾ ಫಾರೊ, ಥಾಂಡಿ ನ್ಯೂಟನ್, ಟಿನಾ ಬ್ರೌನ್, ಗ್ಲೋರಿಯಾ ಸ್ಟೀನ್ಮನ್, ಅನಿತಾ ದೇಸಾಯಿ, ಕಿರಣ್ ದೇಸಾಯಿ, ಅಮಿತವ್ ಘೋಷ್, ಜುಂಪಾ ಲಹಿರಿ ಮತ್ತು ಅನುಷ್ಕ ಶಂಕರ್ ಸೇರಿದ್ದಾರೆ.
"ಈ ಕೆಳಗೆ ಸಹಿ ಮಾಡಿರುವ ಲೇಖಕರು, ಪತ್ರಕರ್ತರು, ಸೃಜನಶೀಲ ಕಲಾವಿದರು, ಶಿಕ್ಷಣ ತಜ್ಞರು ಮತ್ತು ಹೋರಾಟಗಾರರು, ಪೆನ್ ಅಮೆರಿಕ, ಇಂಗ್ಲಿಷ್ ಪೆನ್ ಮತ್ತು ಪೆನ್ ಇಂಟರ್ನ್ಯಾಷನಲ್ ಜತೆ ಸೇರಿ, ಭಾರತ ಸರ್ಕಾರ ಇತ್ತೀಚೆಗೆ ಪತ್ರಕರ್ತ ಆತಿಶ್ ತಸೀರ್ ಅವರ ಒಸಿಐ ಸ್ಥಾನಮಾನವನ್ನು ಕಿತ್ತುಹಾಕಿರುವ ಕ್ರಮದ ಬಗ್ಗೆ ಚಿಂತಿತರಾಗಿದ್ದೇವೆ" ಎಂದು ಪತ್ರ ಆರಂಭವಾಗುತ್ತದೆ.
ತಸೀರ್ ಅವರು ಭಾರತ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅವರ ವಿರುದ್ಧ ವೈಯಕ್ತಿಕವಾಗಿ ಪ್ರತೀಕಾರಕ್ಕೆ ಮುಂದಾಗಿರುವುದು ತೀರಾ ಕಳವಳಕರಿ. ಒಸಿಐ ನಿಬಂಧನೆಗಳ ಆಶಯಗಳಿಗೆ ಅನುಗುಣವಾಗಿ ಈ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.