ಗ್ರಾಹಕನ ಖಾತೆಯಿಂದ ತಪ್ಪಾಗಿ 40.8 ಲಕ್ಷ ರೂ ಡ್ರಾ: ಅಸಲಿನೊಂದಿಗೆ ಬಡ್ಡಿ, ಪರಿಹಾರ ನೀಡುವಂತೆ ಬ್ಯಾಂಕ್ಗೆ ಸೂಚನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ನ. 15: ಯಾವುದೇ ಸಮರ್ಪಕ ಕಾರಣವಿಲ್ಲದೆ ಗ್ರಾಹಕನ ಖಾತೆಯಿಂದ ಡ್ರಾ ಮಾಡಿದ 40.85 ಲಕ್ಷ ರೂಪಾಯಿಯೊಂದಿಗೆ ಬಡ್ಡಿ ಹಾಗೂ ಪರಿಹಾರ ನೀಡುವಂತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ಸರ್ವೋಚ್ಚ ಗ್ರಾಹಕ ಆಯೋಗ ಎನ್ಸಿಡಿಆರ್ಸಿ ನಿರ್ದೇಶಿಸಿದೆ.
ಕರ್ನಾಟಕದ ಖಾತೆದಾರ ಗೋಪಾಲ್ ಅವರ ಖಾತೆಯಿಂದ ಹಣ ತೆಗೆದ 2015 ಎಪ್ರಿಲ್ 11ರಿಂದ ಮರು ಪಾವತಿ ಮಾಡುವ ದಿನಾಂಕದ ವರೆಗಿನ ಬಡ್ಡಿಯನ್ನು ಪಾವತಿಸುವಂತೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (ಎನ್ಸಿಡಿಆರ್ಸಿ) ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ಸೂಚಿಸಿದೆ. ಅಲ್ಲದೆ 25 ಸಾವಿರ ಪರಿಹಾರ ನೀಡುವಂತೆ ಕೂಡ ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ನಿರ್ದೇಶಿಸಿದೆ.
ತನ್ನ ಸೇವೆಯಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ ಎಂಬ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಪ್ರತಿಪಾದನೆಯನ್ನು ಆಯೋಗ ತಿರಸ್ಕರಿಸಿದೆ.
''ಲಕ್ಷ್ಮೀ ವಿಲಾಸ್ ಬ್ಯಾಂಕ್ ಯಾವುದೇ ಸಮರ್ಪಕ ಕಾರಣವಿಲ್ಲದ ಕರ್ನಾಟಕದ ನಿವಾಸಿ ಗೋಪಾಲ್ ಅವರ ಖಾತೆಯಿಂದ 40,85,254 ರೂಪಾಯಿ ಡ್ರಾ ಮಾಡಿತ್ತು. ಈ ಬಗ್ಗೆ ಗೋಪಾಲ್ ಅವರು ದೂರು ನೀಡಿದ್ದರು. ಈ ಮೊತ್ತವನ್ನು ಪ್ರತಿಪಾದಿಸುವ ಹಕ್ಕು ಗೋಪಾಲ್ ಅವರಿಗೆ ಇದೆ'' ಎಂದು ಎನ್ಸಿಡಿಆರ್ಸಿ ಸದಸ್ಯರಾದ ದೀಪಾ ಶರ್ಮಾ ಹಾಗೂ ಸಿ. ವಿಶ್ವನಾಥ್ ಹೇಳಿದ್ದಾರೆ.