ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಬಲವಂತದಿಂದ ಮೂತ್ರ ಕುಡಿಸಲ್ಪಟ್ಟ ದಲಿತ ವ್ಯಕ್ತಿ ಸಾವು
ಅಮೃತಸರ, ನ.16: ನವೆಂಬರ್ 7ರಂದು ನಾಲ್ವರಿಂದ ಅಮಾನುಷ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 37 ವರ್ಷದ ದಲಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಜಗ್ಮೈಲ್ ಸಿಂಗ್ ಮೃತಪಟ್ಟ ವ್ಯಕ್ತಿ. ಈತನ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ಬಳಿಕ ಈತನಿಗೆ ಬಲವಂತವಾಗಿ ಮೂತ್ರ ಕುಡಿಸಿದ್ದರು.ಸೆಪ್ಟೆಂಬರ್ 21ರಂದು ರಿಂಕು ಮತ್ತು ಜಗ್ಮೈಲ್ ಮಧ್ಯೆ ಜಗಳವಾಗಿತ್ತು. ಬಳಿಕ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ಇಬ್ಬರ ಮಧ್ಯೆ ರಾಜಿಯಾಗಿತ್ತು.
ಆದರೆ ನವೆಂಬರ್ 7ರಂದು ಇಬ್ಬರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಂಬಕ್ಕೆ ಕಟ್ಟಿ ಹಾಕಿ ನಾಲ್ಕು ಮಂದಿ ದೊಣ್ಣೆಯಿಂದ ಥಳಿಸಿದ್ದಾರೆ. ಬಾಯಾರಿಕೆಗೆ ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಜರ್ನೈಲ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದ.
ಜರ್ನೈಲ್ ಸಿಂಗ್ನ ಕಾಲು ಮುರಿದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಸಂಗೂರ್ ವಿಭಾಗದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಗರ್ಗ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಿಂಕು ಹಾಗೂ ಇತರ ಮೂವರನ್ನು ಬಂಧಿಸಿದ್ದು ಅವರ ವಿರುದ್ಧ ಅಪಹರಣ, ಅಕ್ರಮವಾಗಿ ಕೂಡಿ ಹಾಕಿರುವುದು, ಉದ್ದೇಶಪೂರ್ವಕವಾಗಿ ಹಾನಿ ಎಸಗಿರುವುದು ಸೇರಿದಂತೆ ಐಪಿಸಿ ಮತ್ತು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.