ಕೊಲೆಯಲ್ಲದ ಮಾನವ ಹತ್ಯೆ: ಆರೋಪಿಗೆ ಏಳು ವರ್ಷ ಕಠಿಣ ಸಜೆ
ಮಂಗಳೂರು, ನ.16: ನಗರದ ಯೆಯ್ಯಡಿ ಸಮೀಪ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ನಡೆದ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ಏಳು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಬಿಜೈ ಬಾರೆಬೈಲು ನಿವಾಸಿ ಜಗದೀಶ್ ಶೆಟ್ಟಿ (49) ಶಿಕ್ಷೆಗೊಳಗಾದ ಆರೋಪಿ. ಯೆಯ್ಯೆಡಿ ಬಾರೆಬೈಲು ನಿವಾಸಿ ಡೇನಿಯಲ್ ಫೆರ್ನಾಂಡಿಸ್ (56) ಮೃತಪಟ್ಟವರು.
ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕಡ್ಲೂರು ಸತ್ಯಾನಾರಾಯಣಚಾರ್ಯ ಸಮಗ್ರ ವಿಚಾರಣೆ ನಡೆಸಿ ಇದೊಂದು ‘ಕೊಲೆಯಲ್ಲದ ಮಾನವ ಹತ್ಯೆ’ ಎಂದು ತೀರ್ಮಾನಿಸಿ ಆರೋಪಿಗೆ ಏಳು ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಒಂದು ವೇಳೆ ದಂಡ ತೆರಲು ತಪ್ಪಿದಲ್ಲಿ ಆರೋಪಿ ಒಂದು ವರ್ಷ ಸಾದಾ ಶಿಕ್ಷೆ ಅನುಭವಿಸಬೇಕಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಅವಕಾಶವಿದೆ. ಮೃತ ಡೇನಿಯಲ್ ಅವರ ಪತ್ನಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಲ್ಲಿ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ನಿರ್ದೇಶನ ಮಾಡಿದ್ದಾರೆ.
ಪ್ರಕರಣ ವಿವರ: ಕೊಲೆಯಾದ ಡೇನಿಯಲ್ ಪೈಂಟರ್ ಕೆಲಸ ಮಾಡಿಕೊಂಡಿದ್ದು, ಕೊಲೆ ಆರೋಪಿ ಜಗದೀಶ್ ಶೆಟ್ಟಿ ಕ್ಯಾಂಟೀನ್ನಲ್ಲಿ ದುಡಿಯುತ್ತಿದ್ದ. ಇವರಿಬ್ಬರು ರಾತ್ರಿ ವೇಳೆ ಮನೆಗೆ ಹೋಗದೆ ಯೆಯ್ಯಿಡಿ ಸೋನಿ ಪ್ಲೈವುಡ್ ಮಳಿಗೆ ಸಮೀಪ ಮಲಗುತ್ತಿದ್ದರು. ಪ್ರತಿನಿತ್ಯ ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದರು. ಇದೇ ರೀತಿ 2018ರ ಸೆ.20ರಂದು ರಾತ್ರಿ 8:50ರ ವೇಳೆಗೆ ಮದ್ಯಪಾನ ಮಾಡಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳವಾಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿದ್ದು ಜಗದೀಶ್ ಶೆಟ್ಟಿ ಅವಾಚ್ಯವಾಗಿ ನಿಂದಿಸಿ ಮಲಗಿದ್ದ ಡೇನಿಯಲ್ ಮೇಲೆ ಕೆಂಪು ಕಲ್ಲನ್ನು ಹಾಕುತ್ತಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಡೇನಿಯಲ್ರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿ ಸೆ.22ರಂದು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಲಿಸದೆ ಸೆ. 23ರಂದು ಮೃತಪಟ್ಟಿದ್ದರು.
ಕೊಲೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಕಂಕನಾಡಿ ನಗರ ಪೊಲೀಸರು ಪ್ರಾರಂಭದಲ್ಲಿ ಕೊಲೆ ಯತ್ನ (ಐಪಿಸಿ 307) ಕೇಸು ದಾಖಲಿಸಿ, ಬಳಿಕ ಕೊಲೆ (ಐಪಿಸಿ 302) ಎಂದು ಪರಿಗಣಿಸಿ ಕೇಸು ದಾಖಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಠಾಣೆಯ ಉಪನಿರೀಕ್ಷಕ ಪ್ರದೀಪ್ ಟಿ.ಆರ್. ನಡೆಸಿ, ನಿರೀಕ್ಷಕರಾದ ಅಶೋಕ್ ಪಿ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 10 ಸಾಕ್ಷಿ ಹಾಗೂ 27 ದಾಖಲೆಗಳನ್ನು ಪರಿಗಣಿಸಲಾಗಿದೆ.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.