‘ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ವ್ಯರ್ಥಗೊಳಿಸಬೇಡಿ’
![‘ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ವ್ಯರ್ಥಗೊಳಿಸಬೇಡಿ’ ‘ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ವ್ಯರ್ಥಗೊಳಿಸಬೇಡಿ’](https://www.varthabharati.in/sites/default/files/images/articles/2019/11/16/219599-1573919750.jpg)
ಉಡುಪಿ, ನ.16: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವಸ್ತುಗಳ ದಾಸರಾಗಿ, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತಿದ್ದಾರೆ. ಮಾದಕ ವಸ್ತು ಗಳಿಗೆ ಬಲಿಯಾಗಲು ಮನಸ್ಸು ಮುಖ್ಯ ಕಾರಣ. ಯುವ ಜನತೆ ಮನಸ್ಸನ್ನು ನಿಗ್ರಹಿಸಿದರೆ ಮಾದಕ ವ್ಯಸನದಿಂದ ದೂರವಾಗಬಹುದು ಎಂದು ಉದ್ಯಾವರ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಜೋನ್ ಜಿ.ಎಂ. ಡಿಸೋಜಾ ಹೇಳಿದ್ದಾರೆ.
ಶನಿವಾರ ಉದ್ಯಾವರ ಟ್ರಿನಿಟಿ ಐಟಿಐ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಉದ್ಯಾವರ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯುವ ಜನತೆ ದೇಶದ ಅಮೂಲ್ಯ ಸಂಪತ್ತು. ಆದರೆ ಇಂದಿನ ಯುವ ಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗಿ ತಮ್ಮ ಜೀವನ ವನ್ನು ತಾವೇ ಹಾಳು ಮಾಡಿಕೊಳ್ಳುತಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಹೆಚ್ಚಾಗಿ ಯುವ ಜನತೆ ಹಾಗೂ ವಿದ್ಯಾರ್ಥಿಗಳನ್ನೆ ಗುರಿಯಾಗಿಟ್ಟುಕೊಂಡಿದ್ದಾರೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲದಲ್ಲಿ ಸಿಲುಕದೇ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ಜೊತೆಗೆ ತಮ್ಮ ಸುತ್ತಮುತ್ತಲಿನ ಜನರು ಮಾದಕತೆಗೆ ಬಲಿಯಾಗುವುದನ್ನು ತಡೆಯಬೇಕು ಎಂದು ಜೋನ್ ಡಿಸೋಜಾ ಹೇಳಿದರು.
ಉದ್ಯಾವರ ಎಸ್ಡಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಗಿರಿಧರ್ ಎಂ. ಕಂಟಿ ಮದ್ಯಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ತಾನು ವೈದ್ಯನಾಗಿ 100ಕ್ಕೂ ಹೆಚ್ಚು ಶವ ಪರೀಕ್ಷೆ ನಡೆಸಿದ್ದು, ದೇಹದ ಅಂಗಾಂಗಗಳ ಸ್ಥಿತಿ ವೀಕ್ಷಿಸಿ, ವ್ಯಕ್ತಿಯ ಸಾವಿಗೆ ಕಾರಣ ಮತ್ತು ಆತನ ಜೀವನ ಶೈಲಿಯನ್ನು ಕರಾರುವಕ್ಕಾಗಿ ತಿಳಿಯ ಬಹುದಾಗಿದೆ. ಇತ್ತೀಚೆಗೆ 70 ವರ್ಷದ ವೃದ್ದ ಮತ್ತು 30 ವರ್ಷ ಯುವಕನ ಮೃತದೇಹದ ಪರೀಕ್ಷೆ ನಡೆಸಿದ ವೈದ್ಯರ ವರದಿಯಂತೆ ಮೃತ 30 ವರ್ಷದ ಯುವಕನ ಅಂಗಾಂಗ ಮತ್ತು 70 ವರ್ಷದ ವೃದ್ದನ ಅಂಗಾಗಗಳು ಒಂದೇ ಸ್ಥಿತಿಯಲ್ಲಿದ್ದವು. ಕಾರಣ ವೃದ್ದನ ಅಂಗಾಂಗಗಳು ವಯೋ ಸಹಜದಿಂದ ಸೊರಗಿದ್ದರೆ, ಯುವಕನ ಅಂಗಾಂಗಗಳು ಮಾದಕ ವಸ್ತುಗಳ ಸೇವನೆಯ ಪರಿಣಾಮ ಹಾಳಾಗಿದ್ದವು ಎಂದು ಅವರು ವಿವರಿಸಿದರು.
ಉದ್ಯಾವರ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕಿ ಮರಿಯಾ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ಜಾಥಾಗೆ ಜಿಪಂ ಅಧ್ಯಕ್ಷರಿಂದ ಚಾಲನೆ: ಇದಕ್ಕೂ ಮೊದಲು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಜಾಥಾವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಚಾಲನೆ ನೀಡಿದರು. ಉದ್ಯಾವರ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿವರೆಗೆ ನಡೆದ ಜಾಥಾದಲ್ಲಿ ಜಿಪಂ ಅಧ್ಯಕ್ಷರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
![](https://www.varthabharati.in/sites/default/files/images/galllery/2019/11/16/UD-N16 DRUG1.jpg)