ತ್ರಿಪುರಾದ ಸಾಂಸ್ಕೃತಿಕ ಅದ್ಭುತಗಳಿಗೆ ಬಾಂಬ್ ಹಾಕಲು ಮೊಘಲರು ಉದ್ದೇಶಿಸಿದ್ದರು ಎಂದ ಬಿಪ್ಲಬ್ ದೇವ್

Photo: Twitter
ಅಗರ್ತಲಾ, ನ.19: ತ್ರಿಪುರಾದ ಸಾಂಸ್ಕೃತಿಕ ಅದ್ಭುತಗಳಿಗೆ `ಬಾಂಬ್' ಹಾಕುವ ಮೂಲಕ ಅವುಗಳನ್ನು ನಾಶಗೊಳಿಸುವ ಉದ್ದೇಶವನ್ನು ಮೊಘಲ್ ಅರಸರು ಹೊಂದಿದ್ದರೆಂದು ರಾಜ್ಯದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಹೇಳಿಕೊಂಡಿದ್ದಾರೆ.
"ಜನರಿಗೆ ಈಗಲೂ ತಿಳಿದಿರದ ಹಲವಾರು ಅದ್ಭುತ ಸ್ಥಳಗಳು ತ್ರಿಪುರಾದಲ್ಲಿದೆ. ಮೊಘಲರು ತ್ರಿಪುರಾದ ಕಲೆ ಹಾಗೂ ವಾಸ್ತುಶಿಲ್ಪಗಳಿಗೆ ಬಾಂಬ್ ಹಾಕಿ ಅವುಗಳನ್ನು ನಾಶಗೊಳಿಸುವ ಉದ್ದೇಶ ಹೊಂದಿದ್ದರು'' ಎಂದು ಅಗರ್ತಲಾದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಹೇಳಿದ್ದು, ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡುವ ಗೋಜಿಗೆ ಹೋಗಿಲ್ಲ.
ಜನರು ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡರೆ ತ್ರಿಪುರಾ ಜಗತ್ತಿನಲ್ಲಿ ಜನಪ್ರಿಯವಾಗುತ್ತದೆ. ಪ್ರತಿಯೊಬ್ಬರೂ ಕನಿಷ್ಠ ಐದು ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಬರೆದರೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ವಿಶೇಷ ಜಾಹೀರಾತುಗಳನ್ನು ನೀಡುವ ಆಗತ್ಯವೇ ಇಲ್ಲ ಎಂದೂ ಅವರು ಹೇಳಿಕೊಂಡರು.
ಕಳೆದ ವರ್ಷವಷ್ಟೇ ಬಿಪ್ಲಬ್ ದೇಬ್ ಅವರು ಕಮ್ಯುನಿಸ್ಟರನ್ನು ಮೊಘಲರು ಹಾಗೂ ಬ್ರಿಟಿಷ್ ಆಡಳಿತಗಾರರಿಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.