ಐದು ವರ್ಷಗಳ ಹಿಂದೆ ಕೇಜ್ರಿವಾಲ್ ಮಾತ್ರ ಕೆಮ್ಮುತ್ತಿದ್ದರು, ಇಂದು ಇಡೀ ದಿಲ್ಲಿಗೆ ಕೆಮ್ಮು ಹರಡಿದ್ದಾರೆ: ಬಿಜೆಪಿ
ಕೇಜ್ರಿವಾಲ್
ಹೊಸದಿಲ್ಲಿ, ನ.19: ಲೋಕಸಭೆಯು ಮಂಗಳವಾರ ವಾಯುಮಾಲಿನ್ಯ ಕುರಿತು ನಡೆಸಿದ ಚರ್ಚೆಗೆ ಈ ಸಮಸ್ಯೆ ಉತ್ತುಂಗಕ್ಕೇರಿರುವ ದಿಲ್ಲಿಯ ಇಬ್ಬರು ಬಿಜೆಪಿ ಸಂಸದರಾದ ರಮೇಶ ಬಿಧುರಿ ಮತ್ತು ಹನ್ಸರಾಜ್ ಹನ್ಸ್ ಅವರು ಗೈರುಹಾಜರಾಗಿದ್ದರು. ರಾಜ್ಯಸಭೆಯಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019ರ ಮೇಲೆ ಮಾತನಾಡುತ್ತಿದ್ದ ಇನ್ನೋರ್ವ ದಿಲ್ಲಿ ಬಿಜೆಪಿ ಸಂಸದ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ ಅವರೂ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ.
ಚರ್ಚೆಯ ಬಳಿಕ ಆಪ್ ಸದನದಲ್ಲಿ ಗೈರುಹಾಜರಾಗಿದ್ದಕ್ಕೆ ಬಿಜೆಪಿ ಸಂಸದರನ್ನು ತರಾಟೆಗೆತ್ತಿಕೊಂಡಿದೆ. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸಂಸದ ಪರ್ವೇಶ ಸಾಹಿಬ್ ಸಿಂಗ ವರ್ಮಾ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದಾಳಿ ನಡೆಸಿದರು.
ಕಳೆದ ನಾಲ್ಕೂವರೆ ವರ್ಷಗಳಿಂದಲೂ ಪ್ರಧಾನಿಯವರು,ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ತನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಕೇಜ್ರಿವಾಲ ಹೇಳಿಕೊಳ್ಳುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಎಲ್ಲರೂ ಕೇಜ್ರಿವಾಲ್ಗೆ ಕೆಲಸ ಮಾಡಲು ಬಿಡುತ್ತಿದ್ದಾರೆ. ಅವರು ಪ್ರತಿಯೊಂದನ್ನೂ ಉಚಿತವಾಗಿ ನೀಡುತ್ತಿದ್ದಾರೆ. ಇಂದು ಅವರು ದಿಲ್ಲಿಗೆ ನೀಡಿರುವುದೇನೆಂದರೆ ಐದು ವರ್ಷಗಳ ಹಿಂದೆ ಅವರೊಬ್ಬರೇ ಕೆಮ್ಮುತ್ತಿದ್ದರು,ಈಗ ಇಡೀ ದಿಲ್ಲಿ ಕೆಮ್ಮುತ್ತಿದೆ. ಅವರು ದಿಲ್ಲಿಗೆ ಉಚಿತವಾಗಿ ನೀಡಿರುವುದು ಮಾಲಿನ್ಯವನ್ನು ಮಾತ್ರ ಎಂದು ಟೀಕಿಸಿದರು.