ಜೆಎನ್ಯು ಶುಲ್ಕ ಏರಿಕೆಯನ್ನು ಮರು ಪರಿಶೀಲಿಸಿ: ‘ಸೂಪರ್ 30’ ಸ್ಥಾಪಕ ಆನಂದ್ ಕುಮಾರ್
ಹೊಸದಿಲ್ಲಿ, ನ. 19: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಶುಲ್ಕ ಏರಿಕೆ ಪ್ರತಿಭಟನೆ ಸೌಹಾರ್ದಯುತವಾಗಿ ಪರಿಹಾರವಾಗಬೇಕು ಎಂದು ಪಾಟ್ನಾ ಮೂಲದ ‘ಸೂಪರ್ 30’ ಸ್ಥಾಪಕ ಆನಂದ್ ಕುಮಾರ್ ಹೇಳಿದ್ದಾರೆ.
ಐಐಟಿ ಪರೀಕ್ಷೆಯ ಎದುರಿಸಲು ಆರ್ಥಿಕ ದುರ್ಬಲ ಮಕ್ಕಳಿಗೆ ತರಬೇತಿ ನೀಡಲು ‘ಸೂಪರ್ 30’ ಯೋಜನೆ ಆರಂಭಿಸಿದವರು ಗಣಿತಶಾಸ್ತ್ರಜ್ಞ ಆನಂದ್ ಕುಮಾರ್. ಇವರ ಕುರಿತ ‘ಸೂಪರ್ 30’ ಹೆಸರಿನ ಬಯೋಪಿಕ್ ಇತ್ತೀಚೆಗೆ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಆನಂದ್ ಕುಮಾರ್ ಪಾತ್ರದಲ್ಲಿ ನಟಿಸಿದ್ದರು.
‘‘ಪಾವತಿಸಲು ಸಮರ್ಥರಾದವರಿಗೆ ಶುಲ್ಕ ಏರಿಕೆ ಅನ್ವಯವಾಗಬೇಕು ಎಂದು ನಾನು ಭಾವಿಸುತ್ತೇನೆ. ಶ್ರೀಮಂತರು ಹಾಗೂ ಹಣದ ಕೊರತೆಯಿಲ್ಲದವರು ಹೆಚ್ಚಿದ ಶುಲ್ಕ ಪಾವತಿಸಬೇಕು. ಪ್ರತಿಭಾವಂತರು ಹಾಗೂ ಅಗತ್ಯ ಇರುವವರಿಗೆ ಶುಲ್ಕ ಪಾವತಿಯಲ್ಲಿ ವಿನಾಯತಿ ನೀಡಬೇಕು’’ ಎಂದು ಜೆಎನ್ಯು ಕುರಿತ ಪ್ರಶ್ನೆಯೊಂದಕ್ಕೆ ಆನಂದ್ ಕುಮಾರ್ ಹೇಳಿದರು.
ಬಡ ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಇತರ ನೆರವು ನೀಡಬೇಕು. ಶುಲ್ಕ ಏರಿಕೆ ಬಗ್ಗೆ ಆಡಳಿತ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ಪರಿಹಾರ ಕಂಡುಕೊಳ್ಳಬೇಕು. ಶುಲ್ಕ ಹೆಚ್ಚಿಸುವ ಸಂದರ್ಭ ಸರಕಾರ ಮರು ಆಲೋಚಿಸಬೇಕು. ಇದರಿಂದ ಆರ್ಥಿಕ ದುರ್ಬಲರಿಗೆ ತೊಂದರೆ ಉಂಟಾಗುವುದಿಲ್ಲ ಎಂದು ಆನಂದ್ ಕುಮಾರ್ ಹೇಳಿದರು.