ಬೆಂಗಳೂರು: ಯುವಕನ ಕೊಲೆಗೈದ ದಂಪತಿಯ ಬಂಧನ
ಬೆಂಗಳೂರು, ನ.20: ಯುವಕನನ್ನು ಕೊಲೆಗೈದು ಗೋಣಿ ಚೀಲದಲ್ಲಿ ಕಟ್ಟಿ ಬಿಸಾಕಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಇಲ್ಲಿನ ಉತ್ತರ ವಿಭಾಗದ ಪೊಲೀಸರು, ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.
ನಗರದ ಲಗ್ಗೆರೆಯ ಮಂಜು (35) ಹಾಗೂ ಆತನ ಪತ್ನಿ ಸಾವಿತ್ರಿ (28) ಎಂಬವರು ಬಂಧಿತ ದಂಪತಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನ.15ರಂದು ಇಲ್ಲಿನ ಲಗ್ಗೆರೆಯ ಖಾಸಗಿ ಶಾಲೆಯೊಂದರ ಬಳಿ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಠಾಣಾ ಪೊಲೀಸರು ತನಿಖೆ ಕೈಗೊಂಡಾಗ ಮೃತದೇಹವು ಇದೇ ಪ್ರದೇಶದ ನಿವಾಸಿ ಸಂತೋಷ್ನದ್ದು ಎಂದು ಗುರುತಿಸಲಾಗಿತ್ತು.
ಪುತ್ರ ಇತ್ತೀಚಿಗಷ್ಟೇ ವಿವಾಹವಾಗಿದ್ದು, ಅವರ ಕುಟುಂಬಸ್ಥರೇ ಕೊಲೆಗೈದಿರಬಹುದು ಎಂದು ಶಂಕಿಸಿ ಸಂತೋಷ್ ತಂದೆ ಕಾಳಿಂಗೇಗೌಡ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಸಂತೋಷ್ ಮೊಬೈಲ್ಗೆ ಬಂದಿರುವ ಕರೆಗಳ ಮಾಹಿತಿ ಪಡೆದು ಆತ ಚೀಟಿ ವ್ಯವಹಾರ ನಡೆಸುತ್ತಿದ್ದ ಬಂಧಿತ ಆರೋಪಿ ಮಂಜು ಅನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚೀಟಿ ವ್ಯವಹಾರ ನಡೆಸುತ್ತಿದ್ದ ಮಂಜು ಮತ್ತು ಸಾವಿತ್ರಿ ನಡುವಿನ ಖಾಸಗಿ ವಿಡಿಯೊವೊಂದನ್ನು ಸಂತೋಷ್ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುವುದೆಂದು ಬೆದರಿಸಿ, ಹಣ ವಸೂಲಿ ಮಾಡಿದ್ದ. ಇದರಿಂದ ದಂಪತಿ ನೊಂದು, ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.