ವಿಟ್ಲ : ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಬಾಬಾ ರಾಮ್ದೇವ್ ಭೇಟಿ
ವಿಟ್ಲ, ನ. 20: ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರು ಶಾಸ್ತ್ರಾಧ್ಯಯನ ಮಾಡಿ, ಪತಂಜಲಿ ಯೋಗ ಪೀಠದಲ್ಲಿ ಸಮರ್ಪಣೆ ಮಾಡಿದಲ್ಲಿ ಪುರಸ್ಕರಿಸಲಾಗುವುದು ಎಂದು ಪತಂಜಲಿ ಯೋಗ ಪೀಠದ ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಅವರು ಬುಧವಾರ ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು.
ಪ್ರತೀ ದಿನ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಶರೀರ ಶಕ್ತವಾಗಿರಬೇಕು. ಜೀವನ ಪ್ರದರ್ಶನಕ್ಕಾಗಿಯಲ್ಲ. ಪ್ರಭುದರ್ಶನಕ್ಕಾಗಿ ಜೀವನ ಎಂಬ ಭಾವ ನಮ್ಮದಾಗಬೇಕು. ಸಂಸ್ಕೃತ ವ್ಯಾಕರಣದ ಮೂಲ ಗ್ರಂಥ ಅಭ್ಯಸಿಸಬೇಕು. ಬೌದ್ಧಿಕ ವಿಕಾಸದ ಜತೆ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ವಿಕಾಸವಾಗಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪವಿರಬೇಕು. ಗುರುಕುಲ ವಿಶ್ವವಿದ್ಯಾನಿಲಯಕ್ಕೆ ಸಹಕಾರವಿದೆ ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮೈತ್ರೇಯೀ ಗುರುಕುಲದ ಗೌರವಾಧ್ಯಕ್ಷ ಎನ್.ಕುಮಾರ್ ಮತ್ತು ಅಜೇಯ ವಿಶ್ವಸ್ಥ ಮಂಡಳಿ ಸದಸ್ಯ ಪಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.