ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಅಮಾನವೀಯ: ಶಿವಸೇನೆ
ಮುಂಬೈ: ಹಾಸ್ಟೆಲ್ ಶುಲ್ಕ ಏರಿಕೆ ವಿರೋಧಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ವಿಚಾರದಲ್ಲಿ ಬಿಜೆಪಿಯನ್ನು ಶಿವಸೇನೆ ತೀವ್ರವಾಗಿ ಟೀಕಿಸಿದೆ.
"ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆಸಲಾದ ಲಾಠಿಚಾರ್ಜ್ ಅಮಾನವೀಯ. ಇಂತಹ ಘಟನೆ ಕಾಂಗ್ರೆಸ್ ಆಡಳಿತದ ಸಂದರ್ಭ ನಡೆದಿರುತ್ತಿದ್ದರೆ ಬಿಜೆಪಿ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸುತ್ತಿತ್ತಲ್ಲದೆ ಎಬಿವಿಪಿಯಂತಹ ಸಂಘಟನೆಗಳು ದೇಶವ್ಯಾಪಿ ಬಂದ್ ಗೆ ಕರೆ ನೀಡುತ್ತಿದ್ದವು'' ಎಂದು ಶಿವಸೇನೆ ತನ್ನ ಮುಖವಾಣಿ `ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದಿದೆ.
"ದೃಷ್ಟಿದೋಷವಿರುವ ವಿದ್ಯಾರ್ಥಿಗಳನ್ನೂ ಥಳಿಸುವ ಪೊಲೀಸ್ ಪಡೆಗಳು ಜನರ ಸೇವಕರಾಗಲು ಹಾಗೂ ಕಾನೂನು ರಕ್ಷಕರಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಮೇಲೆ ಈ ರೀತಿ ದೌರ್ಜನ್ಯವೆಸಗಬೇಡಿ. ಯಾವುದೇ ಸರಕಾರ ಈ ರೀತಿ ಕಾರ್ಯನಿರ್ವಹಿಸಬಾರದು'' ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಹಿಂಸೆಯನ್ನು ತಡೆಯುವ ಉದ್ದೇಶದಿಂದ ಸಂಬಂಧಿತ ಕೇಂದ್ರ ಸಚಿವರು ಈ ಹಿಂದೆಯೇ ವಿದ್ಯಾರ್ಥಿಗಳನ್ನು ಏಕೆ ವಿಶ್ವಾಸಕ್ಕೆ ಪಡೆದುಕೊಂಡಿಲ್ಲ ಎಂದೂ ಶಿವಸೇನೆ ಪ್ರಶ್ನಿಸಿದೆ.