ಮಂಗಳೂರು: ಎಕೆ ಕುಕ್ಕಿಲರಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ
![ಮಂಗಳೂರು: ಎಕೆ ಕುಕ್ಕಿಲರಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಂಗಳೂರು: ಎಕೆ ಕುಕ್ಕಿಲರಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2019/11/22/220467-1574447314.jpg)
ಮಂಗಳೂರು, ನ. 22: ಮುಸ್ಲಿಮ್ ಲೇಖಕರ ಸಂಘವು ಕನ್ನಡದಲ್ಲಿ ಪ್ರಕಟಗೊಂಡ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಪ್ರತಿವರ್ಷ ನೀಡುವ ರಾಜ್ಯಮಟ್ಟದ ದಿ. ಯು.ಟಿ. ಫರೀದ್ ಸ್ಮರಣಾರ್ಥದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶುಕ್ರವಾರ ನಗರದ ಮಸ್ಜಿದುನ್ನೂರ್ ಬಳಿಯ ಐಎಂಎ ಸಭಾಂಗಣದಲ್ಲಿ ನಡೆಯಿತು.
2017ನೆ ಸಾಲಿನ ಪ್ರಶಸ್ತಿಯನ್ನು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ. ಕುಕ್ಕಿಲ (ಕೃತಿ: ಎಣ್ಣೆ ಬತ್ತಿದ ಲಾಟೀನು) ಪ್ರಶಸ್ತಿ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಖುಷಿಯಾಗುತ್ತಿದೆ. ಅದರಲ್ಲೂ ತನ್ನ ತಾಯಿಯ ಜೊತೆ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ವಿಚಾರವಾಗಿದೆ. ನನ್ನೀ ಸಂಭ್ರಮದ ಹಿಂದೆ ಅನೇಕರ ಬೆಂಬಲ ಮತ್ತು ಪ್ರೋತ್ಸಾಹವಿದೆ. ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಅಬುಧಾಬಿಯ ಬಿಡಬ್ಲ್ಯೂಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ‘ಪ್ರಶಸ್ತಿಗೆ ಆಯ್ಕೆಯಾಗಿರುವ ಕುಕ್ಕಿಲರ ಈ ಕೃತಿಯು ಪ್ರವಾಸ ಕಥನದಂತಹ ಅತ್ಯುತ್ತಮ ಕೃತಿಯಾಗಿದೆ. ಕನ್ನಡ ಭಾಷೆ ನಶಿಸಿಹೋಗುವ ಈ ಕಾಲಘಟ್ಟದಲ್ಲಿ ಕನ್ನಡದಲ್ಲಿ ಬರೆಯುವ ಮುಸ್ಲಿಂ ಲೇಖಕರಿಗೆ ಮುಸ್ಲಿಂ ಲೇಖಕರ ಸಂಘವು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಈ ಅವಕಾಶವನ್ನು ಯುವ ಬರಹಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ ‘ಸಾಹಿತ್ಯವು ತೆವಲು ತೀರಿಸುವ ಉಪಾಧಿಯಲ್ಲ. ಬೌದ್ಧಿಕ ಲೋಕವನ್ನು ಸಂಸ್ಕರಿಸುವ ಪ್ರಕ್ರಿಯೆಯಾಗಿದೆ. ಯಾವೊಬ್ಬನ ಸಾಧನೆ, ಶ್ರಮವು ಪ್ರದರ್ಶನಕ್ಕೆ ಇರುವಂತದ್ದಲ್ಲ ಎಂಬ ಸ್ಪಷ್ಟ ಅರಿವು ಎಲ್ಲರಿಗೂ ಇರಬೇಕು. ಅದಕ್ಕೆ ಲೇಖಕರು, ಸಾಹಿತಿಗಳು ಕೂಡಾ ಹೊರತಲ್ಲ. ಹಾಗಾಗಿ ಯುವ ಬರಹಗಾರರು ಕೀರ್ತಿಯ ಹಿಂದೆ ಬೀಳದೆ ಸಮಾಜವನ್ನು ತಿದ್ದುವ ಪ್ರಾಮಾಣಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಶಸ್ತಿಯ ಪ್ರಾಯೋಜಕ, ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಅವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ಕವಿ ಮುಹಮ್ಮದ್ ಶರೀಫ್ ನಿರ್ಮುಂಜೆ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಆಲಿಕುಂಞಿ ಪಾರೆ ವಂದಿಸಿದರು.
ಬಹುಭಾಷಾ ಕವಿಗೋಷ್ಠಿ
ಕವಿಗಳಾದ ಮುಹಮ್ಮದ್ ಬಡ್ಡೂರು (ಕನ್ನಡ/ಬ್ಯಾರಿ), ರಾಜಾರಾಂ ವರ್ಮ ವಿಟ್ಲ (ಕನ್ನಡ), ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ (ತುಳು), ಜಲೀಲ್ ಮುಕ್ರಿ (ಕನ್ನಡ), ಮುಹಮ್ಮದ್ ಶರೀಫ್ ನಿರ್ಮುಂಜೆ (ಬ್ಯಾರಿ), ಆಯಿಶಾ ಉಳ್ಳಾಲ್ (ಕನ್ನಡ), ಮಿಸ್ರಿಯಾ ಇಸ್ಮತ್ ಪಜೀರ್ (ಬ್ಯಾರಿ) ಹಾಗೂ ಮೌ. ಇಮ್ರಾನುಲ್ಲಾಹ್ ಖಾನ್ ಮನ್ಸೂರಿ (ಉರ್ದು) ಕವನ ವಾಚಿಸಿದರು.