ನೆಹರೂ ಯುವ ಕೇಂದ್ರ ವತಿಯಿಂದ ವಿದ್ಯಾರ್ಥಿಗಳ ಜೀವನ ಕೌಶಲ ಶಿಕ್ಷಣ ಶಿಬಿರಕ್ಕೆ ಚಾಲನೆ

ಮಂಗಳೂರು, ನ.23: ಕೇಂದ್ರ ಸರಕಾರದ ನೆಹರೂ ಯುವ ಕೇಂದ್ರ ಸಂಘಟನೆ (ಎನ್ವೈಕೆ) ವತಿಯಿಂದ ದ.ಕ. ಜಿಲ್ಲೆಯ ಹದಿ ಹರೆಯದ ಮಕ್ಕಳ ಏಳು ದಿನಗಳ ಜೀವನ ಕೌಶಲ ಶಿಕ್ಷಣ ಶಿಬಿರಕ್ಕೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಕೌಶಲ ಕೇಂದ್ರ ಮತ್ತು ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ (ಸಿಐಎಲ್) ಸಹಯೋಗದಲ್ಲಿ ಎನ್ವೈಕೆ ಸಂಘಟನೆಯು ಶಿಬಿರ ಆಯೋಜಿಸಿದೆ. 9ರಿಂದ 18ರ ಹರೆಯದ ಮಕ್ಕಳ ಗುಣಾತ್ಮಕ ವಿಕಸನಕ್ಕಾಗಿ ವಿಶೇಷವಾಗಿ ಆಯೋಜಿಸಿರುವ ಲೈಫ್ ಸ್ಕಿಲ್ ಶಿಬಿರಕ್ಕೆ ಕೆನರಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಮಾಲಿನಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಅವರನ್ನು ಸರಿಯಾದ ದಿಕ್ಕಿನಲ್ಲಿ ಸಾಗುವ ಇಂತಹ ಜೀವನ ಕೌಶಲ ತರಬೇತಿಗಳನ್ನು ನೀಡುವುದು ಅಗತ್ಯವಾಗಿದೆ. ಮಕ್ಕಳು ತಪ್ಪುಹೆಜ್ಜೆ ಇಡುವ ಮೊದಲೇ ಅವರನ್ನು ತಿದ್ದುವಂತೆ ಆಗಬೇಕು ಎಂದು ಹೇಳಿದರು.
ಸಮಾಜದಲ್ಲಿ ಎಲ್ಲರೊಂದಿಗೆ ಸೇರಿ ಜೀವಿಸಲು ಜೀವನ ಕೌಶಲ್ಯ ಹೊಂದಿರುವುದು ಇಂದಿನ ಆಧುನಿಕ ಯುಗದಲ್ಲಿ ಅತ್ಯಗತ್ಯವಾಗಿದೆ. ಇಂದಿನ ಯುವ ಪೀಳಿಗೆ ಹೆಚ್ಚಾಗಿ ಸ್ಮಾರ್ಟ್ಫೋನಿನಂತಹ ಸಾಧನಗಳಿಗೆ ಬಹುಬೇಗನೆ ಹೊಂದಿಕೊಳ್ಳುತ್ತಾರೆ. ಆದರೆ ತನ್ನ ಕುಟುಂಬ-ಸಹಪಾಠಿಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಜೀವನದಲ್ಲಿ ಸಾಧನೆ ಮಾಡಲು ಪಠ್ಯೇತರ ಕೌಶಲಗಳು ಬೇಕಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಹೇಳಿದರು.
ನೆಹರೂ ಯುವ ಕೇಂದ್ರದ ದ.ಕ.ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರಪೇಟೆ, ಸಿಐಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್, ನೆಹರೂ ಯುವ ಕೇಂದ್ರದ ಕೃಷ್ಣಮೂರ್ತಿ ರಾವ್, ಎನ್ವೈಕೆ ಮಂಗಳೂರು ತಾಲೂಕು ಪ್ರತಿನಿಧಿಗಳಾದ ವಿಕಾಸ್ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.
ಸಿಐಎಲ್ ಸಂಚಾಲಕ ನಂದಗೋಪಾಲ್ ಕಾರ್ಯಕ್ರಮ ಸಂಯೋಜಿಸಿದರು.







