ಮಹಾರಾಷ್ಟ್ರ: ನಾಳೆ ಸುಪ್ರೀಂಕೋರ್ಟ್ ನಿಂದ ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಅರ್ಜಿ ವಿಚಾರಣೆ
ಹೊಸದಿಲ್ಲಿ, ನ. 23: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ದೇವೇಂದ್ರ ಫಡ್ನವೀಸ್ ಅವರಿಗೆ ಆಹ್ವಾನ ನೀಡಿರುವ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಡೆ ಹಾಗೂ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿರುವ ಕೇಂದ್ರದ ನಡೆ ಪ್ರಶ್ನಿಸಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಶನಿವಾರ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ರವಿವಾರ ನಡೆಸಲಿದೆ.
ಸುಪ್ರೀಂ ಕೋರ್ಟ್ ಮನವಿಯ ವಿಚಾರಣೆಯನ್ನು ರವಿವಾರ ಪೂರ್ವಾಹ್ನ 11.30ಕ್ಕೆ ನಡೆಸಲಿದೆ. ಆದರೆ, ಪೀಠದಲ್ಲಿ ಯಾರೆಲ್ಲ ನ್ಯಾಯಮೂರ್ತಿಗಳು ಇರಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ನ್ಯಾಯವಾದಿ ಸುನೀಲ್ ಫರ್ನಾಂಡಿಸ್ ತಿಳಿಸಿದ್ದಾರೆ.
‘ಕುದುರೆ ವ್ಯಾಪಾರ’ ತಡೆಯುವ ಸಲುವಾಗಿ ರವಿವಾರ 14ನೇ ವಿಧಾನ ಸಭೆಯ ವಿಶೇಷ ಅಧಿವೇಶನ ನಡೆಸಬೇಕು. ಈ ಅಧಿವೇಶನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಕಾರ್ಯಸೂಚಿಗೆ ಮಾತ್ರ ಸೀಮಿತವಾಗಿರಬೇಕು. ಅದರ ಬೆನ್ನಲ್ಲೆ ಬಲಾಬಲ ಪರೀಕ್ಷೆ ನಡೆಸಬೇಕು. ಅದಕ್ಕಾಗಿ ಸುಪ್ರಿಂ ಕೋರ್ಟ್ ಸೂಕ್ತ ನಿರ್ದೇಶನ ನೀಡಬೇಕು ಮನವಿ ಕೋರಿದೆ.
Next Story