ಮಹಾರಾಷ್ಟ್ರ ಸರಕಾರವನ್ನು ದೇವರೇ ಕಾಪಾಡಬೇಕು: ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ನ. 23: ಮಹಾರಾಷ್ಟ್ರ ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ-ಎನ್ಸಿಪಿ ಮೈತ್ರಿ ಸರಕಾರವನ್ನು ದೇವರೆ ಕಾಪಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎನ್ಸಿಪಿ, ಶಿವಸೇನೆ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಇದ್ದಕ್ಕಿದ್ದಂತೆ ಬಿಜೆಪಿ-ಎನ್ಸಿಪಿ ಸರಕಾರ ರಚನೆಯಾಗಿದೆ ಎಂದು ಹೇಳಿದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದರು. ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆಯನ್ನು ನೋಡಿದರೆ ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ ಎಂದ ಅವರು, ಬಿಜೆಪಿ ವಿರುದ್ಧದ ಮತ ಪಡೆದಿದ್ದ ಎನ್ಸಿಪಿ, ಇದೀಗ ಅದೇ ಪಕ್ಷ ಬಿಜೆಪಿ ಜತೆ ಅಧಿಕಾರ ಹಂಚಿಕೊಂಡಿದೆ ಎಂದು ಟೀಕಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅವಕಾಶವಾದಿಗಳಾಗಿದ್ದು, ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಜತೆ ಸೇರಿದ್ದರು. ಅನಂತರ ಬಿಜೆಪಿ ಜತೆ ಸರಕಾರ ರಚನೆ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.
ಮಹಾರಾಷ್ಟ್ರದಲ್ಲಿ ಅಗತ್ಯವಿರುವ ಸ್ಥಾನವನ್ನು ಬಿಜೆಪಿ-ಎನ್ಸಿಪಿ ಹೊಂದಿದೆ. ಕೆಲ ಕಾಲ ಈ ಸರಕಾರ ಆಡಳಿತ ನಡೆಸಬಹುದು. ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕಾರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು ಎಂದರು.
ಯಾರಿಗೂ ಬೆಂಬಲ ಇಲ್ಲ: ಜೆಡಿಎಸ್ ಪಕ್ಷ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೆ ಇಲ್ಲ. ರಾಜ್ಯದ ಜನತೆ ಒಳಿತೇ ಜೆಡಿಎಸ್ನ ಗುರಿ. ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷ ಹೋರಾಟ ನಡೆಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
‘ದೇಶದಲ್ಲಿಂದು ಯಾವ ರಾಜಕೀಯ ಪಕ್ಷದಲ್ಲೂ ನೈತಿಕತೆ ಉಳಿದಿಲ್ಲ. ಅದರ ಫಲವಾಗಿಯೇ ಮಹಾರಾಷ್ಟ್ರ ರಾಜ್ಯದಲ್ಲಿ ಪರಸ್ಪರ ವಿರುದ್ಧ ಸಿದ್ಧಾಂತ ಹೊಂದಿರುವ ಎನ್ಸಿಪಿ-ಬಿಜೆಪಿ ಮೈತ್ರಿ ಸರಕಾರ ರಚನೆಯಾಗಿದೆ’
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ