ಕೊರಗ ಸಮುದಾಯದ ಅವಿಭಜಿತ ದ.ಕ. ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
![ಕೊರಗ ಸಮುದಾಯದ ಅವಿಭಜಿತ ದ.ಕ. ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಕೊರಗ ಸಮುದಾಯದ ಅವಿಭಜಿತ ದ.ಕ. ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ](https://www.varthabharati.in/sites/default/files/images/articles/2019/11/24/220726-1574605661.jpg)
ಉಡುಪಿ, ನ.24: ಕೊರಗ ಸಮುದಾಯದ ಯುವಕರಲ್ಲಿ ಅದ್ಬುತವಾದ ಕ್ರೀಡಾ ಪ್ರತಿಭೆಗಳಿದ್ದರೂ ಎಸ್ಎಸ್ಎಲ್ಸಿ ವಿದ್ಯಾಭ್ಯಾಸದ ನಂತರ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಸಿಗದೆ ಪ್ರತಿಭೆಗಳ ಅನಾವರಣ ಸಾಧ್ಯವಾಗುತ್ತಿಲ್ಲ ಎಂದು ಯುವ ವಕೀಲ ಅಸದುಲ್ಲಾ ಕಟಪಾಡಿ ಹೇಳಿದ್ದಾರೆ.
ಚಿಟ್ಪಾಡಿ ಬಾಯ್ಸಾ ಕ್ರಿಕೆಟರ್ಸ್ ವತಿಯಿಂದ ಕೊರಗ ಸಮುದಾಯದವರಿಗೆ ಉಡುಪಿ ಬೀಡಿನಗುಡ್ಡೆಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡು ದಿನಗಳ ಅವಿಭಜಿತ ದ.ಕ.ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಕೂಟ ಬಾಯ್ಸಾ ಟ್ರೋಫಿ -2019 ಇದರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಬಡತನದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಕೊರಗ ಸಮುದಾಯದ ಹೆಚ್ಚಿನ ಯುವಕರು ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ. ಈ ಸಮುದಾಯದ ಪ್ರತಿಭೆಗಳಿಗೆ ಸೂಕ್ತ ಸಂಘಟಿತ ಪ್ರೋತ್ಸಾಹ ದೊರೆತಲ್ಲಿ ರಾಷ್ಟ್ರ, ಅಂತಾರಾಷ್ಟೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆ, ಕಲೆಯನ್ನು ಅತಿಯಾಗಿ ಪ್ರೀತಿಸುವ ಕೊರಗ ಸಮುದಾಯವರು ಕ್ರೀಡಾ ಸ್ಫೂರ್ತಿಗೆ ಇತರರಿಗೆ ಮಾದರಿಯಾಗಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಲು ಸರಕಾರೇತರ ಸಂಘಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಪಂದ್ಯಾಕೂಟವನ್ನು ಉಡುಪಿ ನಗರಸಭಾ ಸದಸ್ಯ ಕೃಷ್ಣರಾವ್ ಕೊಡಂಚ ಉದ್ಘಾಟಿಸಿ, ಶುಭಾಕೋರಿದರು. ಕ್ರಿಕೆಟ್ ಆಟಗಾರ ಎ.ಕೆ.ಸ್ಪೋಟ್ಸ್ ನ ಸಂಪತ್ ಬೈಲಕೆರೆ, ಕೊರಗ ಸಮುದಾಯದ ಚಿಟ್ಪಾಡಿಯ ಗುರಿಕಾರ ಆನಂದ ಚಿಟ್ಪಾಡಿ, ಅಲೆವೂರಿನ ಗುರಿಕಾರ ಆನಂದ ಅಲೆವೂರು, ಬಾಯ್ಸಾ ತಂಡದ ಅಧ್ಯಕ್ಷ ಸುನಿಲ್ ಉಪಸ್ಥಿತರಿದ್ದರು.
ಶಂಕರ ಕಾಡಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಈ ಪಂದ್ಯಕೂಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಒಟ್ಟು 44 ತಂಡಗಳು ಭಾಗ ವಹಿಸಿವೆ.