ಭಾರತ್ ಸ್ಕೌಟ್ಸ್ , ಗೈಡ್ಸ್ ದ.ಕ. ಜಿಲ್ಲಾ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ
ಮಂಗಳೂರು, ನ.24: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರವಿವಾರ ದ.ಕ.ಜಿಲ್ಲಾಧಿಕಾರಿಯ ನಿವಾಸದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಕಲಿತ ವೌಲ್ಯ ಜೀವನದುದ್ದಕ್ಕೂ ಶಾಶ್ವತ. ಸ್ಕೌಟ್ಸ್ ಶಿಸ್ತುಬದ್ಧ, ಕೌಶಲ್ಯಯುತ ಬದುಕನ್ನು ಕಟ್ಟಿ ಕೊಡುತ್ತದೆ. ಇದರಿಂದ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ರಾಜ್ಯದಲ್ಲಿ ಪ್ರಸ್ತುತ 6.12 ಲಕ್ಷ ಹಾಗೂ ಜಿಲ್ಲೆಯಲ್ಲಿ 53 ಸಾವಿರ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿದ್ದಾರೆ. ಮುಂದಿನ ವರ್ಷಕ್ಕೆ 8.50 ಲಕ್ಷ ಮಕ್ಕಳನ್ನು ಇದರಲ್ಲಿ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 63 ಸಾವಿರ ಮಕ್ಕಳನ್ನು ಸೇರಿಸುವ ಗುರಿಯಿದೆ. ಅಂಗನವಾಡಿ ಸಹಿತ ಎಲ್ಲ ಶಾಲೆಗಳಲ್ಲಿ ಸ್ಕೌಟ್ಸ್ ಆರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಕ್ಕಳಲ್ಲಿ ಸ್ಕೌಟ್ಸ್ ಬಗ್ಗೆ ಆಸಕ್ತಿ ಮೂಡಿಸಲು ಅಂಗನವಾಡಿಯಿಂದಲೇ ತರಬೇತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಕಡೆ ಅಂಗನವಾಡಿ ಶಿಕ್ಷಕರಿಗೆ ‘ಬನ್ನೀಸ್’ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಪಿಲಿಕುಳದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಮೂಲಭೂತ ಸೌಲಭ್ಯಗಳು ಆಗಬೇಕಾಗಿದೆ. ಜಿಲ್ಲಾಡಳಿತದ ಕಡೆಯಿಂದ ಸಹಕಾರ ನೀಡಬೇಕು ಎಂದು ಎನ್.ಜಿ.ಮೋಹನ್ ಮನವಿ ಮಾಡಿದರು.
ಗೈಡ್ಸ್ ಜಿಲ್ಲಾ ಆಯುಕ್ತ ಐರಿನ್ ಡಿಕುನ್ನ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ, ಉಪಾಧ್ಯಕ್ಷ ವಸಂತರಾವ್ ಉಪಸ್ಥಿತರಿದ್ದರು.
ಸ್ಕೌಟ್ಸ್ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಯು.ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಭರತ್ರಾಜ್ ಹಾಗೂ ಸುಫಲಾ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು.