1.3 ಕೋಟಿ ರೈತರಿಗೆ ಸಿಕ್ಕಿಲ್ಲ ಪ್ರಧಾನಮಂತ್ರಿ ಕಿಸಾನ್ ನೆರವು
ಲಕ್ನೋ, ನ. 24: ಅರ್ಹ ಕೃಷಿಕರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆದಾಯ ನೆರವು ಖಾತರಿ ನೀಡುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅನುಷ್ಠಾನದಲ್ಲಿನ ಅನೇಕ ದೋಷಗಳಿಂದಾಗಿ ಉತ್ತರಪ್ರದೇಶದ ದೊಡ್ಡ ಸಂಖ್ಯೆಯ ಫಲಾನುಭವಿಗಳು ಅಸಮಾಧಾನಗೊಂಡಿದ್ದಾರೆ.
ಪೋರ್ಟಲ್ನಲ್ಲಿ ಅಂಕಿ-ಅಂಶ ದಾಖಲಾತಿಯಲ್ಲಿ ವ್ಯತ್ಯಾಸ ಕಂಡು ಬಂದುದರಿಂದ ರಾಜ್ಯದ 1.3 ಕೋಟಿ ಜನರು ನಾಲ್ಕನೇ ಕಂತನ್ನು ಸ್ವೀಕರಿಸಿಲ್ಲ. ನವೆಂಬರ್ 30ರ ಒಳಗೆ ಅಂಕಿ-ಅಂಶಗಳನ್ನು ಸರಿಪಡಿಸಲಾಗುವುದು ಹಾಗೂ ಎಲ್ಲ ಫಲಾನುಭವಿಗಳು ಡಿಸೆಂಬರ್ 1ರಿಂದ ತಮ್ಮ ಬಾಕಿ ಪಡೆಯಲಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ ಎಲ್ಲ ಜಿಲ್ಲೆಗಳ ದಂಡಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಕೇಂದ್ರದ ಪೋರ್ಟಲ್ಗೆ ಅಪ್ಲೋಡ್ ಮಾಡಲಾದ 1.11 ಕೋಟಿ ರೈತರ ಮಾಹಿತಿಗಳು ತಪ್ಪಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪೋರ್ಟಲ್ನಲ್ಲಿ ಉಲ್ಲೇಖಿಸಲಾಗಿರುವ ರೈತರ ಹೆಸರು ಆಧಾರ್ ಕಾರ್ಡ್ನಲ್ಲಿ ಬರೆಯಲಾದ ಹೆಸರುಗಳಿಗೆ ಹೋಲಿಕೆಯಾಗುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ತಪ್ಪುಗಳನ್ನು ಸರಿಪಡಿಸದೇ ಇದ್ದರೆ ರೈತರು ತಮ್ಮ 4ನೇ ಕಂತು 2000 ರೂಪಾಯಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.