ನಮ್ಮ ಕುಟುಂಬದಲ್ಲಿ ನನ್ನಿಂದಲೇ ರಾಜಕೀಯ ಕೊನೆಯಾಗುತ್ತದೆ: ಆನಂದ್ ಸಿಂಗ್

ಹೊಸಪೇಟೆ, ನ.24: ಕೊನೆಯ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನಮ್ಮ ಕುಟುಂಬದಲ್ಲಿ ನನ್ನಿಂದಲೇ ರಾಜಕೀಯ ಕೊನೆಯಾಗುತ್ತದೆ ಎಂದು ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹೇಳಿದ್ದಾರೆ.
ರವಿವಾರ ತಾಲೂಕಿನ ಭುವನಹಳ್ಳಿಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ರಾಮನ ವನವಾಸದಂತೆ ತಾನೂ ಸಹ 14 ತಿಂಗಳು ಬಿಜೆಪಿ ಬಿಟ್ಟು ವನವಾಸ ಅಭುವಿಸಿದ್ದೇನೆ. ಈಗ ಪುನಃ ಬಿಜೆಪಿಗೆ ಬಂದಿರುವುದಕ್ಕೆ ಸಂತಸವಾಗಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸುವ ವಿಚಾರ ಪ್ರಸ್ತಾಪಿಸಿದಾಗ ತಕ್ಷಣವೇ ಸ್ಪಂದಿಸಿ, ಅನುದಾನ ನೀಡಿದ್ದಾರೆ. ಜೊತೆ ಜೊತೆಗೆ ನೂತನ ವಿಜಯನಗರ ಜಿಲ್ಲೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ವಿರೋಧವಿಲ್ಲ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹೊರತು ಅದನ್ನು ವಿರೋಧಿಸಿಲ್ಲ. ಅವರು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ ಎಂದ ಅವರು, ಖುದ್ದು ನಾನೇ ಅವರೊಂದಿಗೆ ಮಾತನಾಡಿರುವೆ. ಆದರೆ, ಮಾಧ್ಯಮಗಳಲ್ಲಿ ವಿರೋಧಿಸಿದ್ದಾರೆ ಎಂಬರ್ಥದಲ್ಲಿ ಸುದ್ದಿಗಳು ಬರುತ್ತಿವೆ ಎಂದರು.
‘ನಾನು ಟ್ವೆಂಟಿ-20 ಆಟಗಾರ’
2018ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಮೇಲೆ ಕ್ಷೇತ್ರದ ಜನ ಭರವಸೆ ಇಟ್ಟು ಕಾಂಗ್ರೆಸ್ನಿಂದ ಗೆಲ್ಲಿಸಿದ್ದರು. ಆದರೆ, ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಮೈತ್ರಿ ಸರಕಾರದಲ್ಲಿ ಗೊಂದಲಗಳು ಏರ್ಪಟ್ಟಿದ್ದರಿಂದಾಗಿ ಕ್ಷೇತ್ರಕ್ಕೆ ಏನೂ ಮಾಡಲು ಆಗಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೊಮ್ಮೆ ಸ್ವಾರ್ಥಿಗಳಾಗ ಬೇಕಾಗುತ್ತದೆ.ಅಷ್ಟೇ ಅಲ್ಲದೆ, ನಾನು ಟೆಸ್ಟ್ ಮ್ಯಾಚ್ ರಾಜಕಾರಣಿ ನಾನಲ್ಲ. ಟ್ವೆಂಟಿ-20 ಆಟಗಾರ.
-ಆನಂದ್ ಸಿಂಗ್, ಬಿಜೆಪಿ ಅಭ್ಯರ್ಥಿ







