ಬಾಲಕಿ ಅಪಹರಣ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
ಅರಾರಿಯಾ (ಉತ್ತರಪ್ರದೇಶ), ನ. 24: ಹದಿನೇಳು ವರ್ಷದ ಬಾಲಕಿಯ ಅಪಹರಣದ ಆರೋಪದಲ್ಲಿ ಬಿಜೆಪಿ ನಾಯಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ಬಿಧುನಾ ಬ್ಲಾಕ್ ಪಂಚಾಯತ್ ಪ್ರಮುಖ್ 26 ವರ್ಷದ ಕೌಶಲೇಂದ್ರ ರಜಪೂತ್ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾನೆ. ಕೌಶಲೇಂದ್ರ ರಜಪೂತ್ರ ಅಂತರ್ಜಾತಿ ವಿವಾಹಕ್ಕೆ ಅವರ ಕುಟುಂಬ ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಈ ನಡುವೆ ಬಾಲಕಿಯ ತಂದೆ ಹಾಗೂ ಸಹೋದರನಿಗೆ ಥಳಿಸಿದ ಆರೋಪದಲ್ಲಿ ಕೌಶಲೇಂದ್ರನ ಕುಟುಂಬದ ಸದಸ್ಯರು ಹಾಗೂ ಬಿಧುನಾ ಬ್ಲಾಕ್ನ ನಾಲ್ವರು ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಕುಟುಂಬದ ಮಹಿಳಾ ಸದಸ್ಯರಿಗೆ ಬಾಲಕಿಯ ತಂದೆ ಹಾಗೂ ಸಹೋದರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೌಶಲೇಂದ್ರ ರಜಪೂತ್ನ ಕುಟುಂಬ ಪ್ರತಿ ದೂರು ದಾಖಲಿಸಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೌಶಲೇಂದ್ರ ಹಾಗೂ ಅಪ್ರಾಪ್ತೆಯನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.