ವೇದ ಪಾರಾಯಣದಿಂದ ಮಿದುಳು ಜಾಗೃತವಾಗುತ್ತದೆ- ಸುಬ್ರಹ್ಮಣ್ಯ ಸ್ವಾಮೀಜಿ
ಆಳ್ವಾಸ್ನಲ್ಲಿ ಧನ್ವಂತರಿ ಪ್ರಶಸ್ತಿ ಪ್ರದಾನ, ವೇದ ಪಾರಾಯಣ ಪರಿಷತ್ ಉದ್ಘಾಟನೆ
![ವೇದ ಪಾರಾಯಣದಿಂದ ಮಿದುಳು ಜಾಗೃತವಾಗುತ್ತದೆ- ಸುಬ್ರಹ್ಮಣ್ಯ ಸ್ವಾಮೀಜಿ ವೇದ ಪಾರಾಯಣದಿಂದ ಮಿದುಳು ಜಾಗೃತವಾಗುತ್ತದೆ- ಸುಬ್ರಹ್ಮಣ್ಯ ಸ್ವಾಮೀಜಿ](https://www.varthabharati.in/sites/default/files/images/articles/2019/11/24/220785-1574616410.jpg)
ಮೂಡುಬಿದಿರೆ: 'ನಮಗೆ ನಮ್ಮ ಶಾಸ್ತ್ರದ ಬಗ್ಗೆ ಆದರ, ವಿಶ್ವಾಸ ಇರಲಿ, ಅವಜ್ಞೆ ಬೇಡ. ಆಯುರ್ವೇದವೂ ಒಳಗೊಂಡಂತೆ ಭಾರತೀಯ ವೈದ್ಯ ಪದ್ಧತಿಗಳ ಬಗ್ಗೆ ಶ್ರದ್ಧೆಯಿಂದ ಅಧ್ಯಯನ ಮಾಡಬೇಕಾಗಿದೆ; ಅವುಗಳಿಂದ ಲೋಕಕ್ಕೆ ಕ್ಷೇಮ ಪ್ರಾಪ್ತಿ ಯಾಗುವಂತೆ ಮಾಡಬೇಕಾಗಿದೆ' ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಧನ್ವಂತರಿ ಜಯಂತಿಯಂದು ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ `ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ , ವೇದ ಪಾರಾಯಣ ಪರಿಷತ್ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವ'ದಲ್ಲಿ ಆಶೀರ್ವಚನವಿತ್ತ ಅವರು, `ವೇದ ಪಾರಾಯಣದಿಂದ ನಮ್ಮ ಮಿದುಳು ಜಾಗೃತವಾಗುತ್ತದೆ ಎಂಬುದನ್ನು ಅರಿತಿರುವ ಅಮೇರಿಕಾದವರು ತಮ್ಮ ಪಠ್ಯಕ್ರಮದಲ್ಲಿ ವೇದ ಪಾರಾಯಣವನ್ನೂ ಅಳವಡಿಸಿಕೊಂಡಿದ್ದಾರೆ. ಜ್ವರಕ್ಕೆ ವಿಷ್ಣು ಸಹಸ್ರ ನಾಮ ಪಠನ ಉತ್ತಮ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬಿತ್ಯಾದಿ ನಂಬಿಕೆಗಳ ಮೂಲವನ್ನು ಅಧ್ಯಯನ ಮಾಡಬೇಕಾಗಿದೆ' ಎಂದು ಅವರು ಹೇಳಿದರು. `ಸಂಪತ್ತು, ಹೆಸರು ಮತ್ತು ಸಂಕಷ್ಟ ಉತ್ತಮರಿಗೆ ಮಾತ್ರ ಬರುವುದು; ಅದನ್ನು ನಿರ್ವಿಕಾರದಿಂದ ಸ್ವೀಕರಿಸಿದಾಗ ನಮ್ಮ ವ್ಯಕ್ತಿತ್ವ ಸ್ಪುಟಗೊಳ್ಳುತ್ತದೆ' ಎಂದು ಅವರು ಸಾಂದರ್ಭಿಕವಾಗಿ ಅವರು ಹೇಳಿದರು.
ಧನ್ವಂತರಿ ಪ್ರಶಸ್ತಿ ಪ್ರದಾನ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪುತ್ತೂರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ. ರವಿಶಂಕರ್ ಪೆರ್ವಾಜೆ ಅವರಿಗೆ `ಆಳ್ವಾಸ್ ಧನ್ವಂತರಿ ಪ್ರಶಸ್ತಿ -2019' ಪ್ರದಾನ ಮಾಡಲಾಯಿತು. ಡಾ. ಮಂಜುನಾಥ ಭಟ್ ಸಮ್ಮಾನ ಪತ್ರ ವಾಚಿಸಿದರು.
ನಂಬಿಕೆ , ಆತ್ಮವಿಶ್ವಾಸದಿಂದ ಕೆಲಸ ಮಾಡುವ ಮೂಲಕ ಆಯುರ್ವೇದ ವೈದ್ಯಪದ್ಧತಿಯಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದ ಡಾ. ರವಿಶಂಕರ್ ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆರಂಭದ ವರ್ಷಗಳಲ್ಲಿ ಬೋಧನೆ, ಚಿಕಿತ್ಸೆಗಾಗಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ದಿನಗಳನ್ನು ಸ್ಮರಿಸಿಕೊಂಡರು.
ವೇದ ಪಾರಾಯಣ ಪರಿಷತ್ ಉದ್ಘಾಟನೆ
ಆಯುರ್ವೇದದ ಮೂಲ ಗ್ರಂಥಗಳ ಶ್ಲೋಕಗಳನ್ನು ಛಂದೋಬದ್ಧವಾಗಿ ಪಠನ, ಕಂಠಪಾಠ ಮಾಡಲು ಅನುಕೂಲವಾಗುವಂತೆ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ತೆರೆಯಲಾಗಿರುವ ವೇದ ಪಾರಾಯಣ ಪರಿಷತ್ನ್ನು ಸುಬ್ರಹ್ಮಣ್ಯ ಮಠಾಧೀಶರು ಉದ್ಘಾಟಿಸಿದರು.
ತರಗತಿವಾರು ಪ್ರತಿಭಾವಂತ ವಿದ್ಯಾರ್ಥಿಗಳು, ಸಾಹಿತ್ಯ, ಸಾಂಸ್ಕøತಿಕ, ಕ್ರೀಡಾ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಆತ್ಮ ಸಂಶೋಧನ ಕೇಂದ್ರದ ಡಾ. ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಪ್ರಾಚಾರ್ಯೆ ಡಾ. ಝೆನಿಕಾ ಡಿ'ಸೋಜ ವರದಿ ವಾಚಿಸಿದರು. ಡಾ. ನಾರಾಯಣನ್ ಬಹುಮಾನಿತರ ವಿವರ ನೀಡಿದರು. ವೈದ್ಯಕೀಯ ಸಾಹಿತ್ಯ ಸಂಶೋಧನ ಸಂಯೋಜಕಿ ಡಾ. ಸೌಮ್ಯ ಸುಬ್ರಹ್ಮಣ್ಯ ಪದ್ಯಾಣ ಅವರ ನಿರ್ವಹಣೆಯಲ್ಲಿ ಡಾ. ಸುಬ್ರಹ್ಮಣ್ಯ ಪದ್ಯಾಣ ಆಯುರ್ವೇದ ಶ್ಲೋಕಗಳನ್ನು ಛಂದೋಬದ್ಧವಾಗಿ ಹಾಡಿದರು; ವೈದ್ಯ ವಿದ್ಯಾರ್ಥಿಗಳು ಶ್ಲೋಕಗಳ ಪಠನಗೈದರು. ಸಾಂಸ್ಕೃತಿಕ ಕಲಾಪ ಸಂಯೋಜಿಸಲಾಗಿತ್ತು. ಟ್ರಸ್ಟಿಗಳಾದ ವಿವೇಕ ಆಳ್ವ, ಡಾ. ವಿನಯ್ ಆಳ್ವ, ಡಾ. ಹನಾ ಶೆಟ್ಟಿ, ಡಾ. ಗೀತಾ ಎಂ. ಭಟ್ ನಿರೂಪಿಸಿದರು. ಡಾ. ಸೌಮ್ಯಸುಬ್ರಹ್ಮಣ್ಯ ವಂದಿಸಿದರು.