ಹೈನುಗಾರಿಕೆ ದೇಶದ ಆರ್ಥಿಕತೆಯ ಬೆನ್ನೆಲುಬು: ಜಿ.ಜಗದೀಶ್
ಉಡುಪಿಯಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ

ಉಡುಪಿ, ನ.26: ಹೈನುಗಾರಿಕೆ ಅಥವಾ ಹಾಲು ಉತ್ಪಾದನೆ ಇದೀಗ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ದೇಶದ ರೈತರು ಸ್ವಾಭಿಮಾನದಿಂದ ಬದುಕುತಿದ್ದರೆ ಅದಕ್ಕೆ ಕ್ಷೀರಕ್ರಾಂತಿಯೇ ಕಾರಣ ಎಂಬುದು ನಮಗೆಲ್ಲಾ ಹೆಮ್ಮೆ ತರುವ ವಿಷಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಕ್ಷೀರ ಕ್ರಾಂತಿಯ ಪಿತಾಮಹರೆನಿಸಿದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳವಾರ ಅಜ್ಜರಕಾಡಿನ ಪುರಭವನದಲ್ಲಿ ಹಮ್ಮಿಕೊಂಡ ‘ರಾಷ್ಟ್ರೀಯ ಹಾಲು ದಿನಾಚರಣೆ’ ಹಾಗೂ ಶುದ್ಧ ಹಾಲು ಉತ್ಪಾದನೆಯ ಮಹತ್ವ ಕುರಿತ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
1970ರಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮೂಲಕ ದೇಶದಲ್ಲಿ ಆಗಿದ್ದ ಹಾಲಿನ ಕೊರತೆಯನ್ನು ನೀಗಿಸಿ ಹಾಲಿನ ಹೊಳೆ ಹರಿಯು ವಂತೆ ಮಾಡಿದ ಅದ್ಭುತ ಸಾಧಕ ಡಾ.ಕುರಿಯನ್ರ ಸಾಧನೆಯನ್ನು ಎಲ್ಲಾ ಹೈನುಗಾರರು ನೆನೆಯಬೇಕಾಗಿದೆ. ಇಂದು ಭಾರತ ವಿಶ್ವದ ನಂ.1 ಹಾಲು ಹಾಗೂ ಹಾಲು ಉತ್ಪನ್ನಗಳ ಉತ್ಪಾದಕ ರಾಷ್ಟ್ರವಾಗಿದ್ದರೆ ಅದಕ್ಕೆ ಕುರಿಯನ್ರ ದೂರದೃಷ್ಟಿಯ ಪ್ರಯ್ನ, ಭದ್ರಬುನಾದಿ ಕಾರಣ ಎಂದರು.
ಇಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ದೇಶಕ್ಕೆ ಅಗ್ರಸ್ಥಾನಿಯಾ ಗಿದೆ. ಅದೇ ರೀತಿ ಹೈನುಗಾರಿಕೆ ಯಲ್ಲಿ ತೊಡಗಿರುವ ರೈತರಿಗೆ ಲಾಭಾಂಶ ವರ್ಗಾವಣೆ ಮಾಡುವುದರಲ್ಲಿ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಹೊಂದಿ ಲಾಭಾಂಶ ವರ್ಗಾವಣೆಯಲ್ಲಿ ದೇಶಕ್ಕೇ ಮಾದರಿಯಾಗಲಿ ಎಂದು ಜಿ.ಜಗದೀಶ್ ಶುಭಹಾರೈಸಿದರು.
ಹಾಲು ಅಮೃತ ಸಮಾನ ಎನ್ನುತ್ತೇವೆ. ಆದರೆ ಇದೇ ಹಾಲಿಗೆ ವಿಷ ಬೆರೆಸು ವಂತಹ ಕುಕೃತ್ಯಗಳನ್ನೂ ಹಲವರು ಮಾಡುತ್ತಿದ್ದಾರೆ. ಇಂಥವರನ್ನು ಎಂದೂ ಕ್ಷಮಿಸಬಾರದು. ಇಂತಹ ಕೆಲಸ ಮಾಡುವವರನ್ನು ಗುರುತಿಸಿ ಮಟ್ಟಹಾಕಬೇಕು ಎಂದ ಜಿ.ಜಗದೀಶ್, ಈ ನಿಟ್ಟಿನಲ್ಲಿ ತಾನು ಹಿಂದೆ ಕೆಲಸ ಮಾಡಿದ್ದ ಕೋಲಾರ ಜಿಲ್ಲೆಯ ರೈತರು, ಕಳೆದ 14 ವರ್ಷಗಳಲ್ಲಿ 12 ವರ್ಷಗಳ ಬರಗಾಲವನ್ನು ಎದುರಿಸಿ, ಹೈನುಗಾರಿಕೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿ ರುವುದನ್ನು ಪ್ರಶಂಸೆಯೊಂದಿಗೆ ನೆನಪಿಸಿಕೊಂಡರು.
ಹೈನುಗಾರಿಕೆಯಿಂದಾಗಿ ಕೋಲಾರದ ರೈತರು ಯಾರೂ ಸಹ ಆತ್ಮಹತ್ಯೆಗೆ ಶರಣಾಗಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಇಂದು ರೈತ ಮಹಿಳೆಯೊಬ್ಬಳು ಕೂಡಾ ಸೆಲೆಬ್ರಿಟಿ ಆಗಬಹುದೆನ್ನುವುದನ್ನು ರಾಯಚೂರಿನ ಕವಿತಾ ಮಿಶ್ರಾ ತೋರಿಸಿಕೊಟ್ಟಿ ದ್ದಾರೆ. ದೇಶದ ಯಾವುದೇ ಮೂಲೆಗೆ ಹೋದರೂ ಅವರ ಸಾಧನೆಯನ್ನು ಗುರುತಿಸಿ ಹೊಗಳುತ್ತಾರೆ. ಅವರ ಸಾಧನೆ ಎಲ್ಲ ರೈತರಿಗೂ ಮಾದರಿಯಾಗಲಿ ಎಂದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಗಳ ಮಳಿಗೆಯನ್ನು ಸ್ಥಾಪಿಸಲು ಜಾಗ ಗುರುತಿಸಲು ಈಗಾಗಲೇ ನಗರಸೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಮೂಲಕ ಅಭಿವೃದ್ಧಿ ಪಡಿಸಲಾದ ‘ಮೇಘ ತಂತ್ರಜ್ಞಾನ’ ಆಧರಿಸಿದ ಮಿಲ್ಕೊ ಸಾಪ್ಟ್ವೇರ್ನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ, ರೈತರು ಸ್ವಾಭಿಮಾನದಿಂದ ಬದುಕಬೇಕು. ಯಾವ ಕೆಲಸವೂ ಕೀಳಲ್ಲ. ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಬೇಕು ಎಂದರು.
ಒಂದೇ ಬೆಳೆಯನ್ನು ಆಶ್ರಯಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚು. ಆದುದರಿಂದ ಋತು ಆಧಾರಿತ ಮತ್ತು ಬಹುಬೆಳೆ ಆಧಾರಿತ ಕೃಷಿ ಮಾಡಿದಾಗ ಇನ್ನಿತರ ಉದ್ಯೋಗಗಳಂತೆಯೆ ಪ್ರತೀ ತಿಂಗಳೂ ನಿಗದಿತ ಆದಾಯ ಬರುವಂತಾಗುತ್ತದೆ. ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿಸಾಕಣೆ, ಕುರಿಸಾಕಣೆ ಮುಂತಾದ ಉಪಕಸುಬುಗಳಲ್ಲಿ ತೊಡಗಿಸಿಕೊಂಡಾಗ ರೈತರ ಆದಾಯಕ್ಕೆ ಯಾವುದೇ ಅಡ್ಡಿ ಬರುವುದಿಲ್ಲ. ಶ್ರೀಗಂಧ ನರ್ಸರಿ ಆದಾಯಕರ ಬೆಳೆಯಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದು ಕೋಟ್ಯಂತರ ರೂ.ಆದಾಯ ಪಡೆದುಕೊಳ್ಳಬಹುದು ಎಂದರು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕೂಟದ ಅಧೀನದಲ್ಲಿ ಬರುವ 725 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ ಶೇ.60 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಶೇ.40ರಷ್ಟು ಸಂಘಗಳಿಗೆ ಸ್ವಂತ ಕಟ್ಟಡಕ್ಕೆ ಜಾಗದ ಅಗತ್ಯವಿದ್ದು, ಜಿಲ್ಲಾಡಳಿತ ಒದಗಿಸುವಂತೆ ಮನವಿ ಮಾಡಿದರು.
ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ, ಐರೋಡಿ ಜಗದೀಶ ಕಾರಂತ, ಸ್ಮಿತಾ ಆರ್.ಶೆಟ್ಟಿ ಹಾಗೂ ವಿವಿಧ ಒಕ್ಕೂಟ ಗಳ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಹಾಲು ಡೀಲರ್ಗಳ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ದಯಾನಂದ ರಾವ್ರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರಶೆಟ್ಟಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ಮತ್ತು ಜಾನೆಟ್ ರೋಸಾರಿಯೋ ನಿರೂಪಿಸಿದರು. ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ವಂದಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಾಂತೀಯ ಡೈರಿ ಸಾಯನ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮಚಂದ್ರ ಪಿ. ಅವರು ಶುದ್ಧ ಹಾಲು ಉತ್ಪಾದನೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಹಾಲು ಉತ್ಪಾದಕರು, ಗ್ರಾಹಕರಿಗೂ ಆ್ಯಪ್
ದ.ಕ ಹಾಲು ಒಕ್ಕೂಟದ 725 ಸಹಕಾರ ಸಂಘಗಳ ಪೈಕಿ 648 ಸಹಕಾರ ಸಂಘಗಳಲ್ಲಿ ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕಗಳಿವೆ. ಈ ಘಟಕಗಳು ಪ್ರಸ್ತುತ ಬಳಸುತ್ತಿರುವ ಸಾಪ್ಟ್ವೇರ್ನಲ್ಲಿ ಕೆಲವು ನ್ಯೂನತೆ ಗಳಿದ್ದುದರಿಂದ ಒಕ್ಕೂಟ ತನ್ನದೇ ಆದ ‘ಮೇಘ ತಂತ್ರಜ್ಞಾನ’ ಆಧಾರಿತ ಸಾಪ್ಟವೇರ್ನ್ನು ಅಭಿವೃದ್ದಿ ಪಡಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತುಗಳಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದಕರಾದ ಹೈನುಗಾರರಿಗೆ ಅಗತ್ಯ ಮಾಹಿತಿಗಳನ್ನು ನೇರವಾಗಿ ಅವರ ಮೊಬೈಲಿಗೆ ತಲುಪಿಸಲು ಅವಕಾಶವಾಗು ವಂತೆ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಡೀಲರ್ ಗಳಿಗಾಗಿ ಆ್ಯಪ್ ಇದ್ದು, ಶೀಘ್ರವೇ ನಮ್ಮ ಗ್ರಾಹಕರಿಗೂ ಇ-ಕಾಮರ್ಸ್ ಮೂಲಕ ಒಕ್ಕೂಟದ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸಲು ಆ್ಯಪ್ ಒಂದನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.










