ಅಜಿತ್ ಪವಾರ್ ಜತೆ ಮೈತ್ರಿ ಕುರಿತ ಪ್ರಶ್ನೆಗೆ ಫಡ್ನವೀಸ್ ಹೇಳಿದ್ದು ಹೀಗೆ….
ಮುಂಬೈ, ನ.27: ಮಹಾರಾಷ್ಟ್ರದಲ್ಲಿ ಎನ್ಸಿಪಿಯ ಅಜಿತ್ ಪವಾರ್ ಜೊತೆ ಮೈತ್ರಿ ಮಾಡಿಕೊಂಡು ರಚಿಸಿದ್ದ ಸರಕಾರ ನಾಲ್ಕೇ ದಿನದಲ್ಲಿ ಪತನವಾಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ನಿರಾಕರಿಸಿದ್ದಾರೆ.
ಅಜಿತ್ ಪವಾರ್ ಜೊತೆ ಮೈತ್ರಿಮಾಡಿಕೊಂಡು ಸರಕಾರ ರಚಿಸುವ ಮೂಲಕ ತಪ್ಪು ಮಾಡಿರುವುದಾಗಿ ಅಥವಾ ಅದರಿಂದ ಪಕ್ಷಕ್ಕೆ ನಷ್ಟವಾಗಿರುವುದಾಗಿ ಅನಿಸುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್, ಸರಿಯಾದ ಸಮಯದಲ್ಲಿ ಸರಿಯಾದ ವಿಷಯವನ್ನು ಹೇಳುತ್ತೇನೆ. ತಲೆಬಿಸಿ ಮಾಡಿಕೊಳ್ಳಬೇಡಿ ಎಂದು ಹೇಳಿದರು.
ಶನಿವಾರ ನಡೆದ ನಾಟಕೀಯ ವಿದ್ಯಮಾನದಲ್ಲಿ ಎನ್ಸಿಪಿಯ ಅಜಿತ್ ಪವಾರ್ ಬೆಂಬಲ ಪಡೆದ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ನಿರ್ಧಾರ ವೈಯಕ್ತಿಕವಾದುದು. ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಪ್ರತಿಕ್ರಿಯಿಸಿದ್ದರು. ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಜಿತ್ ಪವಾರ್, ಎನ್ಸಿಪಿಗೆ ಮರಳಿದ್ದಾರೆ. ಬಳಿಕ ಫಡ್ನವೀಸ್ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.