ಗೃಹರಕ್ಷಕರು ಸಮಾಜದ ಸೈನಿಕರು: ವಾರ್ತಾಧಿಕಾರಿ ಖಾದರ್ ಷಾ
ಗೃಹ ರಕ್ಷಕದಳದ ಜಿಲ್ಲಾಮಟ್ಟದ ಕ್ರೀಡಾಕೂಟ ಸಮಾರೋಪ
![ಗೃಹರಕ್ಷಕರು ಸಮಾಜದ ಸೈನಿಕರು: ವಾರ್ತಾಧಿಕಾರಿ ಖಾದರ್ ಷಾ ಗೃಹರಕ್ಷಕರು ಸಮಾಜದ ಸೈನಿಕರು: ವಾರ್ತಾಧಿಕಾರಿ ಖಾದರ್ ಷಾ](https://www.varthabharati.in/sites/default/files/images/articles/2019/11/27/221206-1574874908.jpg)
ಮಂಗಳೂರು, ನ.27: ಗಡಿಯಲ್ಲಿ ದೇಶ ಕಾಯುವ ಯೋಧರಂತೆ, ಸಮಾಜದ ಸೈನಿಕರಾಗಿ ಗೃಹ ರಕ್ಷಕದಳ ಕಾರ್ಯ ನಿರ್ವಹಿಸುತ್ತಿದೆ ಎಂದು ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ತಿಳಿಸಿದ್ದಾರೆ.
ನಗರದ ಮೇರಿಹಿಲ್ನ ಜಿಲ್ಲಾ ಗೃಹ ರಕ್ಷಕದಳ ಕಚೇರಿ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ಗೃಹ ರಕ್ಷಕದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆ, ಸಂಚಾರ ನಿರ್ವಹಣೆ ಹಾಗೂ ವಿಪತ್ತುಗಳ ಸಂದರ್ಭ ಗೃಹರಕ್ಷಕರು ಶ್ಲಾಘನೀಯ ಸೇವೆ ನೀಡಿದ್ದಾರೆ. ಹಲವು ಜಂಜಾಟಗಳ ನಡುವೆ ಸಮಾಜದ ಸ್ವಾಸ್ಥ ಕಾಪಾಡುತ್ತಾ ಉತ್ತಮ ನಿರ್ಣಾಯಕ ಪಾತ್ರವಾಗಿ ರೂಪುಗೊಳ್ಳುವಲ್ಲಿ ಗೃಹರಕ್ಷಕದಳ ಯಶಸ್ವಿಯಾಗಿದೆ. ಜತೆಗೆ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇಲಾಖೆ ನೀಡಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರ ಭಾಗವಹಿಸುವಿಕೆಯಿಂದ ಕ್ರೀಡಾ ಸ್ಫೂರ್ತಿ ಕಾಣಬಹುದು. ಪ್ರತಿದಿನ ರಾತ್ರಿ-ಹಗಲೆನ್ನದೆ ಕಾರ್ಯನಿರತರಾಗಿ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇಂತಹ ಸಂದರ್ಭ ಮಾನಸಿಕವಾಗಿಯೂ, ದೈಹಿಕ ವಾಗಿಯು ಸದೃಢವಾಗಿಸಲು ಕ್ರೀಡೆಗಳು ಬಹಳ ಮುಖ್ಯ ಎಂದರು.
ಜಿಲ್ಲಾ ಗೃಹ ರಕ್ಷಕದಳ ಕಮಾಂಡೆಂಟ್ ಡಾ.ಮುರಲಿ ಮೋಹನ ಚೂಂತಾರು ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಕ್ರೀಡಾಸ್ಫೂರ್ತಿ ಮೆರೆಯಬೇಕು. ಕ್ರೀಡೆಯಲ್ಲಿ ಪಾಲ್ಗೊಂಡಾಗ ಗೆಲುವಿಗಿಂತ, ಕ್ರೀಡೆಯ ಗೆಲುವು ಮುಖ್ಯವಾಗುತ್ತದೆ. ಕ್ರೀಡೆಗೆ ಮೌಲ್ಯ ಹೆಚ್ಚಾಗುತ್ತದೆ. ಮುಂಬರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹ ರಕ್ಷಕದಳ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ರಕ್ಷಕದಳ ಕಚೇರಿ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಮತ್ತು ಗೃಹ ರಕ್ಷಕರು ಉಪಸ್ಥಿತರಿದ್ದರು.