ನ.30ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ: ಎಎಂಪಿ ರಾಜ್ಯ ಮುಖ್ಯಸ್ಥೆ ಡಾ.ಝಾಹಿದಾ ಖಾನ್
ಬೆಂಗಳೂರು, ನ.27: ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷನಲ್ಸ್ (ಎಎಂಪಿ) ಸಂಘಟನೆಯ ವತಿಯಿಂದ ನ.30ರಂದು ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಹೆಣ್ಣೂರು ಬಂಡೆ ರಸ್ತೆಯಲ್ಲಿನ ಕಲ್ಯಾಣನಗರದಲ್ಲಿರುವ ಹಸ್ನತ್ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಎಎಂಪಿ ರಾಜ್ಯ ಮುಖ್ಯಸ್ಥೆ ಡಾ.ಝಾಹಿದಾ ಖಾನ್ ತಿಳಿಸಿದರು.
ಬುಧವಾರ ಇಲ್ಲಿನ ಜೆ.ಸಿ.ನಗರದಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸುಮಾರು ಮೂರು ಸಾವಿರ ಮಂದಿ ಯುವಕರು ಹಾಗೂ ಸುಮಾರು 20 ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿವೆ ಎಂದರು.
ಎಫ್ಎಂಸಿಜಿ, ರಿಟೇಲ್, ಬಿಪಿಓ, ಬ್ಯಾಂಕಿಂಗ್, ಫೈನಾನ್ಸ್, ಫಾರ್ಮಸಿ ಸೇರಿದಂತೆ ವಿವಿಧ ಬಗೆಯ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 2500 ಮಂದಿಗೆ ಉದ್ಯೋಗ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಝಾಹಿದಾ ಖಾನ್ ಹೇಳಿದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು. ಎಸ್ಎಸ್ಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಹೊಸಬರಿಗೆ ಹಾಗೂ ಅನುಭವಿಗಳಿಗೆ ಅವಕಾಶಗಳಿರುತ್ತವೆ. ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಒಳಗೊಂಡ ಬಯೋಡೇಟಾದ ಕನಿಷ್ಠ 10 ಪ್ರತಿಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳು www.ampindia.org/ampjobform ಈ ವೆಬ್ಸೈಟ್ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಸಂಚಾಲಕರನ್ನಾಗಿ ಅಫಾಮ್ ಸಾದಿಕ್-96860 68478, ಅಬ್ದುರ್ರಹ್ಮಾನ್ ರಹೀಮ್-89042 38528ಗೆ ಸಂಪರ್ಕಿಸಬಹುದಾಗಿದೆ ಎಂದು ಝಾಹಿದಾ ಖಾನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷನಲ್ಸ್ ಸಂಸ್ಥೆಯ ಕಾರ್ಯದರ್ಶಿ ನಝೀರ್ ಅಹ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ಲಾ ಅರ್ಶದ್, ಅಮಾನ್ ಅಹ್ಮದ್ ಉಪಸ್ಥಿತರಿದ್ದರು.