ಕಕ್ಯಪದವು: ನ. 30ರಂದು ಸತ್ಯ, ಧರ್ಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ, ನ. 27: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರಾದಲ್ಲಿರುವ ಶ್ರೀರಾಮಾಂಜನೇಯ ಗೆಳೆಯರ ಬಳಗ ವತಿಯಿಂದ ಏಳನೇ ವರ್ಷದ ಸತ್ಯ, ಧರ್ಮ ಜೋಡುಕರೆ ಬಯಲು ಕಂಬಳ ನವೆಂಬರ್ 30ರಂದು ವೇ.ಮೂ. ರಾಘವೇಂದ್ರ ಭಟ್ ಕೊಡಂಬೆಟ್ಟು ಕಾರಿಂಜ ಆಶೀರ್ವಾದದೊಂದಿಗೆ ಕಕ್ಯಪದವಿನ ಮೈರಾ-ಬರ್ಕೆಜಾಲು ಎಂಬಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ರವಿ ಕಕ್ಯಪದವು ಸುಬ್ರಹ್ಮಣ್ಯ ಅವರು ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗುಣಪಾಲ ಕಡಂಬ, ರಾಜೀವ ಶೆಟ್ಟಿ ಎಡ್ತೂರು ಮಾರ್ಗದರ್ಶನದೊಂದಿಗೆ ಪ್ರಮುಖರಾದ ತುಂಗಪ್ಪ ಬಂಗೇರ, ಸಂದೇಶ್ ಶೆಟ್ಟಿ, ರುದ್ರೇಶ್, ವರದರಾಜ ಗೌಡ, ಸತೀಶ್ ಶೆಟ್ಟಿ ಬೋಳದಗುತ್ತು, ಸಾಯಿ ಗಿರಿಧರ ಶೆಟ್ಟಿ, ಕುಸುಮಾಧರ ಉರ್ಕಿ, ಸತೀಶ್ ಪುತ್ರನ್ ಸಹಕಾರದೊಂದಿಗೆ ಗೌರವಾಧ್ಯಕ್ಷ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜಿಲ್ಲಾ ಕಂಬಳ ಸಮಿತಿ ಸಹಕಾರ ದೊಂದಿಗೆ ಲತೀಶ್ ಕುಕ್ಕಾಜೆ ಕಾರ್ಯಾಧ್ಯಕ್ಷತೆಯಲ್ಲಿ ಕಂಬಳ ನಡೆಯಲಿದೆ. ಪ್ರಗತಿಪರ ಕೃಷಿಕ ರವೀಂದ್ರ ಅಡಪ ಬೆಳಗ್ಗೆ 9 ಗಂಟೆಗೆ ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ಸುರೇಶ್ ಶೆಟ್ಟಿ ಮಿಯಾರು ಉದ್ಘಾಟಿಸುವರು ಎಂದು ಅವರು ಮಾಹಿತಿ ನೀಡಿದರು.
ಸುಮಾರು 150 ಜೋಡಿ ಕೋಣಗಳು ಕಂಬಳದಲ್ಲಿ ಪಾಲ್ಗೊಳ್ಳಲಿದ್ದು, ಬೆಳಗ್ಗೆ 9 ಗಂಟೆಗೆ ನೇಗಿಲು ಕಿರಿಯ, ಮಧ್ಯಾಹ್ನ 12ಕ್ಕೆ ಹಗ್ಗ ಹಿರಿಯ, 2ಕ್ಕೆ ನೇಗಿಲು ಹಿರಿಯ ಮತ್ತು ಅಡ್ಡಹಲಗೆ ಹಾಗೂ ಸಂಜೆ 4ಕ್ಕೆ ಹಗ್ಗ ಹಿರಿಯ ಮತ್ತು ಕನೆಹಲಗೆ ಕಂಬಳ ನಡೆಯಲಿದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದಲ್ಲಿ ಕಂಬಳ ಕೇಸ್ನ ಪ್ರಕ್ರಿಯೆಗಳು ವಿಚಾರಣಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಕಂಬಳ ಆಚರಣೆ ಬಗ್ಗೆ ರಾಜ್ಯ ಸರಕಾರ ರೂಪಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಕಂಬಳ ಸಮಿತಿ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು.
ಈ ಸಂದರ್ಭ ವಿಜಯಕರ್ನಾಟಕ ನವತಾರೆ ದ್ವಿತೀಯ ರನ್ನರ್ ಹಾಗೂ ಮಿಸ್ ಕರ್ನಾಟಕ ಇಂಟರ್ ನ್ಯಾಶನಲ್ ಪ್ರಥಮ ರನ್ನರ್ ಕಾವ್ಯ ಅಂಚನ್, ಮಿಸಸ್ ಮಂಗಳೂರು ವಿಜೇತೆ ಸುಧೀಕ್ಷಾ ಕಿರಣ್, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಅಮೀನ್ ವೇಣೂರು, ಕನಸು ಮಾರಾಟಕ್ಕಿದೆ ಚಿತ್ರತಂಡ ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದು, ಚಂದ್ರಶೇಖರ್ ಕಕ್ಯಪದವು ಸಹಕಾರದೊಂದಿಗೆ ಗೊಂಬೆ ನೃತ್ಯ ವೈಭವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸನ್ಮಾನ, ಸಂಸ್ಮರಣೆ
ಅಶ್ವತ್ ಹೆಗ್ಡೆ ಬಳಂಜ ಅವರಿಗೆ ತುಳುನಾಡ ಮುತ್ತು ಪ್ರಶಸ್ತಿ ಪ್ರದಾನ, ಕೋಣದ ಯಜಮಾನ ಇರುವೈಲು ಪಾಣಿಲ ಬಾಡು ಪೂಜಾರಿ, ನೇಮು ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಕಂಬಳ ಕ್ಷೇತ್ರದಲ್ಲಿ ಮಿಂಚಿ ಮರೆಯಾದವರ ಸನ್ಮಾನ ನಡೆಯಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಮೈರ, ಪ್ರಮುಖರಾದ ಸುದರ್ಶನ ಬಜ, ವಸಂತ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.







