ಫಲಿತಾಂಶದ ಬಳಿಕ ಸೋನಿಯಾ ನಿರ್ಧಾರ ಏನೆಂದು ನೋಡೋಣ: ಎಚ್.ಡಿ.ದೇವೇಗೌಡ

ಮೈಸೂರು,ನ.27: ವಿಶ್ವನಾಥ್ ಓರ್ವ ಸೀಸನ್ ಪಾಲಿಟಿಷಿಯನ್. ಹೃದಯದಲ್ಲಿ ಇರುವುದೇ ಬೇರೆ. ಜನರ ಮುಂದೆ ಹೇಳೋದೆ ಬೇರೆ. ಇದೆಲ್ಲವು ಜನಕ್ಕೆ ಅರ್ಥವಾಗುತ್ತೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನು ಟೀಕೆ ಮಾಡಿದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ವಿಶ್ವನಾಥ್ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿ ದೇಶದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕರ್ನಾಟಕದ ರಾಜಕಾರಣಕ್ಕೂ ಇದು ಅನ್ವಯ. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲೂ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ ಎಂದರು. ಮಹಾರಾಷ್ಟ್ರ ಗುಜರಾತ್ ಬೇರೆ, ಕರ್ನಾಟಕ ಬೇರೆ. ಅನರ್ಹರ ವಿಚಾರ ದುಷ್ಪರಿಣಾಮ ಬೀರಿದೆ ಅನ್ನೋದನ್ನು ಒಳ ಹೊಕ್ಕಿ ನೋಡಲು ಹೋಗಿಲ್ಲ. ಆ ಬಗ್ಗೆ ಜನ ನಿರ್ಧಾರ ಮಾಡ್ತಾರೆ ಎಂದರು.
ಯಡಿಯೂರಪ್ಪ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೇನೆ ಅಂತಿದ್ದಾರೆ ಎಂದು ಆರೋಪಿಸಿದರು. ಬಿಎಸ್ ಯಡಿಯೂರಪ್ಪ ಬಳಿ ಸರ್ಕಾರ ಇದೆ. ಗುಪ್ತವಾರ್ತೆ ಇದೆ. ಎಲ್ಲೆಲ್ಲಿ ಹಿಂದೆ ಬಿದ್ದಿದ್ದೀರ ಅಂತ ಗುಪ್ತವಾರ್ತೆ ತಕ್ಷಣವೇ ಹೇಳುತ್ತಿದೆ. ಆರ್ಥಿಕವಾಗಿ ಶಕ್ತಿಯಿದೆ. ಅವರು ಎಷ್ಟೇ ಹಣ ಸಾಗಿಸಿದರೂ ಯಾರು ಕೇಳೋರಿಲ್ಲ. ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ ಎಂದಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನು ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ ಎಂದಿದ್ದಾರೆ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳಿಸುತ್ತೇನೆ ಎಂದಿದ್ದಾರೆ. ಇಷ್ಟೆಲ್ಲಾ ಇರಬೇಕಾದರೆ ನಾವೇನು ಮಾಡೋಕಾಗುತ್ತೆ. ಬಿಎಸ್ ಯಡಿಯೂರಪ್ಪ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.







