ಮಂಗಳೂರು: ವಾಹನ ಸವಾರರು ಮೂಲ ದಾಖಲೆಯನ್ನಿಟ್ಟುಕೊಳ್ಳಲು ಪೊಲೀಸ್ ಆಯುಕ್ತರ ಸೂಚನೆ
ಪೊಲೀಸ್ ಫೋನ್ ಇನ್ ಕಾರ್ಯಕ್ರಮ

ಡಾ.ಪಿ.ಎಸ್. ಹರ್ಷಾ
ಮಂಗಳೂರು, ನ.29: ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು ಪ್ರತಿಯೊಬ್ಬ ವಾಹನ ಸವಾರರು ವಾಹನದ ಮೂಲ ದಾಖಲೆಯನ್ನಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಕಲಿ ಪ್ರತಿಗಳನ್ನು ತಪಾಸಣೆ ವೇಳೆ ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷಾ ಹೇಳಿದರು.
ನಗರದ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿದರು.
ಟ್ರಾಫಿಕ್ ಪೊಲೀಸರು, ಅಧಿಕಾರಿಗಳು ವಾಹನ ತಪಾಸಣೆಯ ವೇಳೆ ವಾಹನದ ಮೂಲ ದಾಖಲೆಗಳನ್ನೇ ಕೇಳುತ್ತಿದ್ದಾರೆ. ನಕಲಿ ಪ್ರತಿಗಳನ್ನು ನೀಡಿದರೂ ಪರಿಗಣಿಸದೆ ದಂಡ ವಿಧಿಸುತ್ತಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಮೂಲ ದಾಖಲೆ ಹಾಜರುಪಡಿಸಲು ಸಮಯ ನೀಡಬೇಕು ಎಂದಿ ನಾಗರಿಕರೊಬ್ಬರು ಕೇಳಿಕೊಂಡರು.
ಇದಕ್ಕೆ ಉತ್ತರಿಸಿದ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ತಿದ್ದುಪಡಿ ಕಾಯ್ದೆಯ ಪ್ರಕಾರ ತಪಾಸಣೆಯ ವೇಳೆ ಮೂಲ ದಾಖಲೆಯನ್ನೇ ನೀಡಬೇಕು. ನಕಲಿ ಪ್ರತಿಗಳನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದರು.
ಕಿಶೋರ್ ಕೊಡಿಯಾಲ್ಗುತ್ತು ಕರೆ ಮಾಡಿ ‘ಮೈ ಬೀಟ್ ಮೈ ಪ್ರೈಡ್’ ಗ್ರೂಪ್ಗಳಲ್ಲಿ ಸಾಮಾನ್ಯ ಸಂದೇಶ ಹರಿದಾಡುವ ಬದಲು ಜನರಲ್ಲಿ ಜಾಗೃತಿ ಮೂಡಿಸುದ ಸಂದೇಶ ಹಾಕಬೇಕು. ಶಾಂತಿ ಕದಡುವ ಸಂದೇಶ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಮನವಿಗೆ ಸ್ಪಂದಿಸಿದ ಆಯುಕ್ತರು ನಗರದಲ್ಲಿ ‘ಮೈ ಬೀಟ್ ಮೈ ಪ್ರೈಡ್’ ಗ್ರೂಪ್ನಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ 48 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀಟ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ರಮೇಶ್ ಕದ್ರಿ ಎಂಬವರು ಕರೆ ಮಾಡಿ ತೇಜಸ್ವಿನಿ ಆಸ್ಪತ್ರೆ ಬಳಿ ರಸ್ತೆಯ ಎರಡು ಕಡೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ಆಯುಕ್ತರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಪಡೀಲ್ ನಿವಾಸಿಯೊಬ್ಬರು ಕರೆ ಮಾಡಿ, ಸ್ಟೇಟ್ಬ್ಯಾಂಕ್ನಿಂದ ಬಿಕರ್ನಕಟ್ಟೆ ಮೂಲಕ ಪಡೀಲ್ಗೆ ಹೋಗುವ ಬಸ್ಗಳು ಸಮಯ ಪರಿಪಾಲನೆ ಮಾಡುತ್ತಿಲ್ಲ. ರಾತ್ರಿ 8:30ರ ಬಳಿಕ ಬಸ್ ಸಂಚಾರವೇ ಇಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಮಿಷನರ್ ಹೇಳಿದರು.
ನಗರದಲ್ಲಿ ಬಸ್ಗಳ ಮೆಟ್ಟಿಲುಗಳು ಎತ್ತರವಾಗಿದ್ದು ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು. ಇದಕ್ಕೆ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ ಸಾರಿಗೆ ನಿಯಮ ಪ್ರಕಾರವೇ ಬಸ್ಗಳ ಮೆಟ್ಟಿಲು ಎತ್ತರಿಸಲಾಗಿದೆ ಎಂದರು.
ಕೊಟ್ಟಾರ ಚೌಕಿ ಸುನೀಲ್ ಎಂಬವರು ಕರೆ ಮಾಡಿ, ಫ್ಲೈಓವರ್ ಕೆಳಗಡೆ ವಾಹನ ಪಾರ್ಕಿಂಗ್ಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಕೊಟ್ಟಾರ ಫ್ಲೈಓವರ್ ಕೆಳಗಡೆ ರಾಮಕೃಷ್ಣ ಮಿಷನ್ ವತಿಯಿಂದ ಇಂಟರ್ಲಾಕ್ ಹಾಕಿ ಸೌಂದರೀಕರಣ ಮಾಡಲಾಗಿದೆ. ಪಾರ್ಕಿಂಗ್ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡಲಾಗುವುದು ಎಂದರು.
ಜಂಟಿ ಕಾರ್ಯಾಚರಣೆಗೆ ಸಿದ್ಧತೆ: ನಗರದ ಹಲವೆಡೆ ಬೀದಿ ವ್ಯಾಪಾರಿಗಳು ಫುಟ್ಪಾತ್, ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಫೋನ್-ಇನ್ ಕಾರ್ಯಕ್ರಮಕ್ಕೆ ದೂರುಗಳು ಬಂದಿದ್ದು, ಇದನ್ನು ಮನಪಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆ ಬಳಿಕ ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮನ ತೆರವು ಮಾಡಲಾಗುವುದು. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರ ಮುಖ್ಯ ಎಂದರು.
ಫೋನ್-ಇನ್ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಅರುಣಾಂಶುಗಿರಿ, ಸಂಚಾರ ಮತ್ತು ಅಪರಾಧ ವಿಭಾಗ ಉಪಪೊಲೀಸ್ ಆಯುಕ್ತ ಲಕ್ಷ್ಮಿಗಣೇಶ್, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಗೋಪಾಲಕೃಷ್ಣ ಭಟ್, ಎಸ್ಸೈ ಸುಗುಮಾರನ್, ಸಿಸಿಆರ್ಬಿ ಇನ್ಸ್ಪೆಕ್ಟರ್ ಭಜಂತ್ರಿ, ಎಎಸ್ಸೈ ಬಾಲಕೃಷ್ಣ, ಎಚ್ಸಿ ಪುರುಷೋತ್ತಮ ಉಪಸ್ಥಿತರಿದ್ದರು.







