ದೇಶದ ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನವಿರುವ ರಾಷ್ಟ್ರಪ್ರೇಮ ಇರಲಿ: ಡಾ.ಕೆಕೆ ಮುಹಮ್ಮದ್

ಮಂಗಳೂರು, ನ. 29: ದೇಶದ ಪುರಾತನ ಮಹತ್ವದ ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿರುವ ಉನ್ನತ ಮನೋಭಾವದ ರಾಷ್ಟ್ರೀಯತೆ ಬೇಕು ಆದರೆ ಅತಿರೇಕದ ರಾಷ್ಟ್ರೀಯತೆ ಒಳ್ಳೆಯದಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಕೆ. ಮುಹಮ್ಮದ್ ತಿಳಿಸಿದ್ದಾರೆ.
ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಕೆ. ಮುಹಮ್ಮದ್ ಅವರು ಮಂಗಳೂರು ಲಿಟ್ ಫೆಸ್ಟ್ ನಲ್ಲಿ ನಡೆದ ’ಸತ್ಯದ ಉತ್ಖನನ’ ಎಂಬ ವಿಷಯದ ಕುರಿತ ಸಂವಾದದಲ್ಲಿ ಭಾಗವಹಿಸಿದ ದೇಶದ ವಿವಿಧ ಪ್ರದೇಶಗಳಲ್ಲಿ ಉತ್ಖನನ ನಡೆಸಿದ ತಮ್ಮ ಅನುಭವವನ್ನು ಹಂಚಿಕೊಂಡರು.
ಭಾರತ ಪುರಾತತ್ವ ಇಲಾಖೆಯಲ್ಲಿ ತಮ್ಮ 40 ವರ್ಷಗಳ ಕೆಲಸದ ಅನುಭವಗಳನ್ನು ಸಭೆಯ ಮುಂದೆ ತೆರೆದಿಟ್ಟರು.
*ತಾಜ್ ಮಹಲ್ ದೇವಾಲಯದ ರಚನೆಯನ್ನು ಹೋಲುವುದಿಲ್ಲ:- ದೇಶದ ಪುರಾತತ್ವ ಇಲಾಖೆಯ ಅಧ್ಯಯನದಿಂದ ಸಾಕಷ್ಟು ನೈಜ ಸಂಗತಿಗಳು ಬಯಲಾಗಿದೆ. ಆದರೆ ಇವುಗಳನ್ನು ಮೂಲೆಗುಂಪಾಗಿಸಿ ಮಾಡುವ ಅತಿರೇಕದ ರಾಷ್ಟ್ರಪ್ರೇಮ ಒಳ್ಳೆಯದಲ್ಲ. ಉದಾಹರಣೆಗೆ ತಾಜ್ ಮಹಲ್ ಯಾವೂದೇ ಶೈವ ಅಥವಾ ವೈಷ್ಣವ ದೇವಾಲಯವನ್ನು ಹೊಲುವುದಿಲ್ಲ. ದೇಶದಲ್ಲಿ 11ನೆ ಶತಮಾನದ ಮೊದಲು ಯಾವೂದೇ ಭಾರತದಲ್ಲಿ ಗುಂಭಜ್ಗಳ ಕಟ್ಟಡಗಳು ನಿರ್ಮಾಣಗೊಂಡ ಉದಾಹರಣೆಗಳಿಲ್ಲ.ತಾಜ್ ಮಹಲ್ ನಿರ್ಮಾಣವಾಗಿರುವುದು 1526ರ ಬಳಿಕ ಎರಡು ಗುಂಭಜ್ಗಳ ಕಟ್ಟಡ ದೇಶದಲ್ಲಿ ನಿರ್ಮಾಣಗೊಂಡಿದೆ. ಆ ಕಾರಣದಿಂದ ಅದನ್ನು 11ನೆ ಶತಮಾನದ ಹಿಂದಿನ ಶೈವ ಮಂದಿರ ಎಂದರೆ ತಪ್ಪಾಗುತ್ತದೆ. ತಾಜ್ ಮಹಲ್ ಮಧ್ಯಕಾಲೀನ ಭಾರತದಲ್ಲಿ ಇಂಡೋ-ಮುಸ್ಲಿಂ ವಾಸ್ತು ಶಿಲ್ಪದ ಮೂಲಕ ರಚನೆಗೊಂಡ ಕಟ್ಟಡ. ನಿರ್ಮಾಣದ ಬಗ್ಗೆ ಆಯೋಧ್ಯೆಯ ಬಾಬ್ರಿ ಮಸೀದಿ -ಶ್ರೀರಾಮ ಜನ್ಮಭೂಮಿಯ ಪ್ರದೇಶದಲ್ಲಿ ಉತ್ಖನನ ನಡೆಸಿದ ತಮ್ಮ ಅನುಭವ ಹಂಚಿಕೊಂಡರು.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಡೆದ ಮೊದಲ ಉತ್ಖನನದಲ್ಲೇ ನೆಲದಡಿ ಹುದುಗಿದ್ದ ಮಂದಿರದ 12 ಕಂಬಗಳು ಸಿಕ್ಕಿದ್ದವು. ಎರಡನೆಯ ಬಾರಿ ನಡೆದ ಉತ್ಖನನವೂ ಅಲ್ಲಿ ಮಸೀದಿಗೆ ಮೊದಲು ಮಂದಿರವಿದ್ದದ್ದನ್ನು ಖಚಿತಪಡಿಸಿದವು. ಇದರ ಆಧಾರದ ಮೇಲೆಯೇ ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದೆ ಎಂದು ಅವರು ಹೇಳಿದರು.
ಆಯೋಧ್ಯೆಯಲ್ಲಿ ಮಂದಿರವನ್ನು ಕೆಡವಿ ಅಲ್ಲಿನ ಮಸೀದಿ ನಿರ್ಮಿಸಿರುವ ಕಾರಣಕ್ಕಾಗಿ ಇಲ್ಲಿನ ಮುಸಲ್ಮಾನರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಅದು ಅಪಘಾನಿಸ್ತಾನದಿಂದ ಆ ಕಾಲದಲ್ಲಿ ಬಂದ ರಾಜರು ಮಾಡಿರುವ ಕೃತ್ಯ ಎನ್ನುವ ವಾಸ್ತವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಕೆ.ಕೆ.ಮೊಹಮ್ಮದ್ ತಿಳಿಸಿದ್ದಾರೆ.
ಪುರಾತತ್ವ ಕಲೆ ಸಂಸ್ಕೃತಿ ನಮ್ಮ ದೇಶದ ಸಂಪತ್ತು ಅದನ್ನು ಸರಿಯಾಗಿ ಬಳಸಿಕೊಳ್ಳಲು ನಮಗೆ ತಿಳಿದಿರಬೇಕು .ನಾವು ವಿಭಿನ್ನದ ಸಂಸ್ಕೃತಿ ಪರಂಪರೆ ಹೊಂದಿದ್ದರೂ ಭಾರತೀಯರು ಎಲ್ಲರೂ ಒಂದೇ ಎನ್ನುವ ರಾಷ್ಟ್ರ ಪ್ರೇಮ ಇಂದಿನ ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೆ ಇದು ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಕೆ. ಮುಹಮ್ಮದ್ ಅವರು ಬರೆದ ’ನಾನೆಂಬ ಭಾರತೀಯ’ ಎಂಬ ಅನುವಾದಿತ ಪುಸ್ತಕ ಈ ಸಂದರ್ಭದಲ್ಲಿ ಬಿಡುಗಡೆಗೊಂಡಿತು.
.jpg)







