ಡಿ.2ರಂದು ಮಂಗಳೂರಿನಲ್ಲಿ ಜಶ್ನೇ ಮದೀನಾ ಮಿಲಾದ್ ಕಾನ್ಫರೆನ್ಸ್
ಪುತ್ತೂರು: ಮಂಗಳೂರಿನ ನೆಹರೂ ಮೈದಾನದಲ್ಲಿ ಡಿ.2ರಂದು ದ.ಕ. ಜಿಲ್ಲಾ ಎಸ್ಕೆಎಸೆಸ್ಸೆಫ್ ಆಶ್ರಯದಲ್ಲಿ ನಡೆಲಿರುವ ಜಶ್ನೇ ಮದೀನಾ ಮಿಲಾದ್ ಕಾನ್ಫರೆನ್ಸ್ ಗೆ ಪುತ್ತೂರು ಭಾಗದಿಂದ ಸುಮಾರು 2 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್ಕೆಎಸೆಸ್ಸೆಫ್ ಪುತ್ತೂರು ವಲಯ ಅಧ್ಯಕ್ಷ ಮಹಮ್ಮದ್ ತಾಜುದ್ದೀನ್ ರಹ್ಮಾನಿ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಿಲಾದ್ ಕ್ಯಾಂಪೇನ್ನ ಅಂಗವಾಗಿ ಜಿಲ್ಲಾ ಸಮಿತಿಯ ಅಧೀನದಲ್ಲಿರುವ 11 ವಲಯಗಳಲ್ಲಿ, ಕ್ಲಸ್ಟರ್, ಶಾಖೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿದೆ. ಇದೀಗ ಸಮಾರೋಪ ಸಮಾವೇಶದಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಅಂದು ಸಂಜೆ ಮಂಗಳೂರು ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ತನಕ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ವಿವಿಧ ದಫ್ ಮತ್ತು ಸ್ಕೌಟ್ ತಂಡಗಳು ಮೆರುಗು ನೀಡಲಿವೆ. ಅನಂತರ ನೆಹರೂ ಮೈದಾನದಲ್ಲಿ ನಡೆಯುವ ಮಿಲಾದ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಭಾಷಣಕಾರರಾಗಿ ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಎ.ಎಂ. ನೌಷಾದ್ ಬಾಖವಿ ಆಗಮಿಸಲಿದ್ದಾರೆ. ಜತೆಗೆ ಜಿಲ್ಲೆಯ ಉನ್ನತ ವಿದ್ವಾಂಸರು ಹಾಗೂ ಸಾಮಾಜಿಕ, ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಜೆಎಂ ಪುತ್ತೂರು ರೇಂಜ್ ಅಧ್ಯಕ್ಷ ಆಸಿಫ್ ಅಝ್ಹರಿ, ಎಸ್ಕೆಎಸೆಸ್ಸೆಫ್ ಪುತ್ತೂರು ವಲಯ ಕೋಶಾಧಿ ಕಾರಿ ಅಶ್ರಫ್ ಮುಕ್ವೆ, ವಿಖಾಯ ಕನ್ವಿನರ್ ಮನ್ಸೂರ್ ಮೌಲವಿ ಅಮ್ಚಿನಡ್ಕ, ಕುಂಬ್ರ ರೇಂಜ್ ಕೋಶಾಧಿಕಾರಿ ಅಬ್ದುಲ್ ಶಕೂರ್ ದಾರಿಮಿ ಉಪಸ್ಥಿತರಿದ್ದರು.







