ಜಾನಪದ ಸಾಹಿತ್ಯ ಬದಲಾಗುತ್ತಲೇ ಹೊರಟಿದೆ: ಪ್ರೊ.ಮಾಧವ ಪೆರಾಜೆ
ಮಂಗಳೂರು, ನ.29: ಜಾನಪದ ಸಾಹಿತ್ಯವನ್ನು ಬಳಸಿದ ಪ್ರತಿಯೊಬ್ಬರು ಅದನ್ನು ತಿದ್ದುತ್ತಾ ಬರುತ್ತಿದ್ದಾರೆ. ಅದು ಹೊಸ ಅವತರಣಿಕೆ ಹೊಂದುತ್ತಾ, ಬದಲಾಗುತ್ತಲೇ ಹೊರಟಿದೆ ಎಂದು ಪ್ರೊ.ಮಾಧವ ಪೆರಾಜೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಟಿಎಂಎ ಪೈ ಹಾಲ್ನಲ್ಲಿ ಶುಕ್ರವಾರ ಆರಂಭಗೊಂಡ ‘ಮಂಗಳೂರು ಲಿಟ್ ಫೆಸ್ಟ್’ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಅಜಕ್ಕಳ ಗಿರೀಶ್ ಭಟ್ ಅವರೊಂದಿಗೆ ಜಾನಪದ ಸಾಹಿತ್ಯದ ಹಿರಿಮೆ, ಸೌಂದರ್ಯದ ಬಗ್ಗೆ ಸಂವಾದ ನಡೆಸಿದರು.
ಜಾನಪದ ಸಾಹಿತ್ಯ ಎನ್ನುವುದು ಪ್ರಾಚೀನ ಪ್ರಕ್ರಿಯೆ. ಇದು ತಲೆತಲಾಂತರದಿಂದ ತಂದೆಯಿಂದ ಮಗನಿಗೆ, ತಾಯಿಯಿಂದ ಮಗಳಿಗೆ, ಬಾಯಿಯಿಂದ ಬಾಯಿಗೆ ಹರಿದುಬಂದ ಸಾಹಿತ್ಯ ರೂಪವಾಗಿದೆ ಎಂದರು.
ಧರ್ಮ, ಜಾತಿಯ ವಿಚಾರವಾಗಿ ಭಾರತಲ್ಲಿ ವಿಶೇಷವಾದ ಸ್ಥಾನವಿದೆ. ಮುಸ್ಲಿಮರು ತಮ್ಮ ಧರ್ಮಗ್ರಂಥವನ್ನು ‘ಕುರ್ಆನ್’ ಎಂದು ಕರೆದರೆ, ಕ್ರಿಶ್ಚಿಯನ್ನರು ‘ಬೈಬಲ್’ನ್ನು ತಮ್ಮ ಧರ್ಮಗ್ರಂಥವೆಂದು ಕರೆಯುತ್ತಾರೆ. ಅದರಂತೆ ಭಾರತೀಯರು ಗ್ರಂಥವನ್ನು ಧರ್ಮಗ್ರಂಥವಾಗಿ ಪರಿಗಣಿಸುವುದಿಲ್ಲ. ವೇದಗಳು, ಭಗವದ್ಗೀತೆ ಆದಿಯಾಗಿ ಹಲವು ಪವಿತ್ರ ಗ್ರಂಥಗಳಿವೆ ಎಂದು ಅವರು ಹೇಳಿದರು.
ಕುರ್ಆನ್, ಬೈಬಲ್ನಂತೆ ಮನುಷ್ಯನು ಹೇಗೆ ಬದುಕಬೇಕೆಂದಷ್ಟೇ ತಿಳಿಸದೇ ಭಾರತದ ಪವಿತ್ರ ಗ್ರಂಥಗಳು ಆಚರಿಸಬೇಕಾದ ಕೆಲ ಮೌಲ್ಯಗಳನ್ನು ಬೋಧಿಸುತ್ತವೆ. ಭಾರತದಲ್ಲಿ ಜಾನಪದ ಸಾಹಿತ್ಯವು ಅದೇ ಕಾರಣಕ್ಕೆ ನಮ್ಮಲ್ಲಿ ಪ್ರಚಲಿತವಾಗಿವೆ. ಭಗವಂತನನ್ನು ಪುರುಷ, ಸ್ತ್ರೀ ರೂಪದಲ್ಲಿ ನೋಡಿರುವ ಧರ್ಮ ಭಾರತದ ಹಿಂದುತ್ವದಲ್ಲಿ ಮಾತ್ರವೇ ಇದೆ. ಸಾಮಾನ್ಯ ಮನುಷ್ಯರ ಬಗ್ಗೆ, ದೇವರ ಬಗ್ಗೆ ಹಾಡುಗಳನ್ನು ರಚಿಸುವ ಮುಕ್ತ ಮನಸ್ಥಿತಿ ನಮ್ಮಲ್ಲಿದೆ ಎಂದು ಹೇಳಿದರು.
ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಬಳಸಿಕೊಂಡು ಯಕ್ಷಗಾನವೆಂಬ ಕರ್ನಾಟಕದ ಜಾನಪದ ಪದ್ಧತಿಯಲ್ಲಿ ಕತೆಯಲ್ಲಿ ಬರುವ ಪಾತ್ರಗಳನ್ನೂ ವೈಭವೀಕರಿಸಿ ಪ್ರಸಂಗಗಳನ್ನು ರಚಿಸಲಾಗಿದೆ. ‘ಬಡಗಿಯೊಬ್ಬ ಕೊಡಲಿಯನ್ನು ಬಳಸುವುದರಿಂದ ಕೊಡಲಿಗೆ ಯಾವ ಕರ್ಮವೂ ಅಂಟಿಕೊಳ್ಳುವುದಿಲ್ಲ’ ಎಂಬ ಸಾಲುಗಳು ಮಹಾಭಾರತದಲ್ಲಿ ಕಾಣಲು ಸಿಗುವುದಿಲ್ಲವಾದರೂ ಯಕ್ಷಗಾನದಲ್ಲಿ ಬಹಳ ಪ್ರಚಲಿತ ವಾಕ್ಯವೇ ಆಗಿದೆ. ಯಕ್ಷಗಾನವು ಜಾನಪದವೋ ಅಥವಾ ಸಂಸ್ಕೃತಿಯೋ ಎನ್ನುವುದು ನಮ್ಮ ದೃಷ್ಟಿಯನ್ನು ಅನುಸರಿಸುತ್ತದೆ ಎಂದು ಅವರು ನುಡಿದರು.







