ಬಿಜೆಪಿ ಭಾರತದ ಆರ್ಥಿಕತೆ ನಾಶ ಮಾಡಿದೆ: ಜಿಡಿಪಿ ಬಗ್ಗೆ ಪ್ರಿಯಾಂಕಾ ಗಾಂಧಿ
Photo: PTI
ಹೊಸದಿಲ್ಲಿ, ನ. 30: ಜಿಡಿಪಿ ಬೆಳವಣಿಗೆ ದರ ಇಳಿಕೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಬಿಜೆಪಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಹಾಗೂ ದೇಶದ ಆರ್ಥಿಕತೆಯನ್ನು ಹಾಳುಗೆಡಹುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದ ಆರ್ಥಿಕತೆ ಬೆಳವಣಿಗೆ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಕಳೆದ 6 ವರ್ಷಗಳಲ್ಲೇ ಅತಿ ಕಡಿಮೆ ಶೇ. 4.5ಕ್ಕೆ ಇಳಿಕೆಯಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶ ಹೇಳಿದೆ.
‘‘ಭರವಸೆ ಬಳಿಕ ಭರವಸೆ...ಪ್ರತಿ ವರ್ಷ 2 ಕೋಟಿ ಉದ್ಯೋಗ, ಬೆಳೆಗಳ ದ್ವಿಗುಣ ಬೆಲೆ, ಉತ್ತಮ ದಿನಗಳು, ಮೇಕ್ ಇನ್ ಇಂಡಿಯಾ, ಆರ್ಥಿಕತೆ ಅಮೆರಿಕದ 5 ಶತಕೋಟಿಗೆ ಏರಿಕೆ... ಭರವಸೆಗಳಿಗೆ ಲೆಕ್ಕ ಇದೆಯೇ ? ಈಗ ಜಿಡಿಪಿ ಶೆ. 4.5ಕ್ಕೆ ಇಳಿಕೆಯಾಗಿದೆ. ಇದು ಎಲ್ಲ ಭರವಸೆಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ’’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘‘ಬಿಜೆಪಿ ಭಾರತವನ್ನು ನಾಶಗೊಳಿಸಿದೆ. ಬೆಳೆಯಲು ಆಕಾಂಕ್ಷೆ ಹೊಂದಿದ್ದ ಭಾರತವನ್ನು ಹಾಳುಗೆಡಹಿದೆ’’ ಎಂದು ಹೇಳಿರುವ ಪ್ರಿಯಾಂಕಾ ಗಾಂಧಿ ಚಿತ್ರವೊಂದನ್ನು ಬಳಸಿ ಅದಕ್ಕೆ ‘26 ತ್ರೈಮಾಸಿಕದಲ್ಲಿ ಅತಿ ಕಡಿಮೆ ಜಿಡಿಪಿ’’ ಎಂಬ ಕ್ಯಾಪ್ಶನ್ ನೀಡಿದ್ದಾರೆ.