ಹದಿಹರೆಯದ ಯುವಜನತೆ ಕ್ಲಿಷ್ಟಕರ ಸವಾಲು ಎದುರಿಸುತ್ತಿದ್ದಾರೆ: ಪಿ.ಎಸ್.ಹರ್ಷ
ನೆಹರೂ ಯುವ ಕೇಂದ್ರ-ಜೀವನ ಕೌಶಲ ಶಿಕ್ಷಣ ಶಿಬಿರದ ಸಮಾರೋಪ
ಮಂಗಳೂರು, ನ.30: ದಶಕಗಳ ಹಿಂದೆ ಯುವಜನತೆ ಎದುರಿಸುತ್ತಿದ್ದ ಸವಾಲುಗಳಿಂದ ವಿಭಿನ್ನವಾದ ಮತ್ತು ಕ್ಲಿಷ್ಟಕರವಾದ ಸವಾಲುಗಳನ್ನು ಇಂದಿನ ಹದಿಹರೆಯದ ಯುವಕ, ಯುವತಿಯರು ಎದುರಿಸುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಉಪಾಧ್ಯಾಯ ಕೌಶಲ ಕೇಂದ್ರದಲ್ಲಿ ನೆಹರೂ ಯುವ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಜೀವನ ಕೌಶಲ ಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹತ್ತು ವರ್ಷಗಳ ಹಿಂದೆ ದತ್ತಾಂಶ ಮನನ ಮಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ಇಂದು ದತ್ತಾಂಶ ಸಮಸ್ಯೆ ಇಲ್ಲ. ಆದರೆ ತಮಗೆ ಬೇಕಾಗಿರುವುದನ್ನು ಆಯ್ದುಕೊಳ್ಳುವುದು ಕೂಡ ಸವಾಲಾಗಿದೆ, ಅದೇ ರೀತಿ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾದ ಇಂದಿನ ಯುವಜನತೆ ಗುಣಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹರ್ಷ ನುಡಿದರು.
ಪಶ್ಚಿಮಘಟ್ಟದ ಅದ್ಭುತ ಪ್ರದೇಶದಲ್ಲಿ ವಾಸಿಸುವ ಅದೃಷ್ಟ ಹೊಂದಿರುವ ನೀವು ಪರಿಸರದಲ್ಲಿ ಇರುವ ಎಲ್ಲ ಜೀವ ಜಂತುಗಳು, ಸಸ್ಯ ಸಂಕುಲಗಳ ಬಗ್ಗೆ ಮಮತೆ ಹೊಂದಿರಬೇಕು. ನಮ್ಮ ಊರು ದೆಹಲಿಯ ಗ್ಯಾಸ್ ಚೇಂಬರಿನಂತೆ ಆಗಬಾರದು. ಜೀವನ ಕೌಶಲದಲ್ಲಿ ಪರಿಸರ ಸಂರಕ್ಷಣೆಯೂ ಒಂದಾಗಿದೆ. ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಧ್ಯೇಯ ಧೋರಣೆ ಇರಿಸಿಕೊಂಡು ಕೆಲಸ ಮಾಡಿ ಎಂದು ಹರ್ಷ ಹೇಳಿದರು.
ಜೀವನದಲ್ಲಿ ಹತ್ತು ಹಲವು ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಜೀವನ ಕೌಶಲ ಅಗತ್ಯ. ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಮಕ್ಕಳಿಗೆ ಜೀವನ ಕೌಶಲ ಶಿಕ್ಷಣ ನೀಡಿ ನಕರಾತ್ಮನಕ ವಿಚಾರಗಳಿಂದ ದೂರ ಇರುವಂತೆ ಸಿದ್ಧಗೊಳಿಸುವ ಅಗತ್ಯವಿದೆ. ನೆಹರೂ ಯುವಕೇಂದ್ರ ಆಯೋಜಿಸಿರುವ ಇಂತಹ ಶಿಬಿರಗಳು ಯುವಜನತೆಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಮಂಗಳೂರು ಮನಪಾ ಕಂದಾಯ ಉಪ ಆಯುಕ್ತೆ ಗಾಯತ್ರಿ ನಾಯಕ್ ನುಡಿದರು.
ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲಡಾ.ಪ್ರವೀಣ್ ಮಾರ್ಟಿಸ್ ನುಡಿದರು.
ನೀತಿ ಆಯೋಗದ ಶಿಫಾರಸಿನ ಮೇರೆಗೆ ಇದೇ ಮೊದಲ ಬಾರಿಗೆ ನೆಹರೂ ಯುವ ಕೇಂದ್ರವು 9ರಿಂದ 18ರ ಹರೆಯದ ಮಕ್ಕಳ ಗುಣಾತ್ಮಕ ವಿಕಸನಕ್ಕಾಗಿ ಈ ವಿಶೇಷ ಶಿಬಿರ ಆಯೋಜಿಸಿದೆ. ಕೇಂದ್ರ ಸರಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಅಧೀನದ ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ ಆಯೋಜಿಸಲಾದ ಜೀವನ ಕೌಶಲ ಶಿಬಿರವನ್ನು ಮಂಗಳೂರಿನ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಸಂಚಾಲಕ ನಂದಗೋಪಾಲ್ ಎಸ್. ನಡೆಸಿಕೊಟ್ಟರು.
ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರ ರಘುವೀರ್ ಸೂಟರ್ಪೇಟೆ ಜೀವನ ಕೌಶಲ ಶಿಬಿರದ ಮಹತ್ವ ವಿವರಿಸಿದರು.