ನೀರು ಕೇಳಿದ ದಲಿತರಿಗೆ ತಂಡದಿಂದ ಹಲ್ಲೆ : ಆರೋಪ
ಕಲಬುರಗಿ: ಹೋಟೆಲ್ ನಲ್ಲಿ ನೀರು ಕೇಳಿದ ದಲಿತರ ಮೇಲೆ ತಂಡವೊಂದು ಹಲ್ಲೆ ನಡೆಸಿದೆ ಎನ್ನಲಾದ ಘಟನೆ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ನಡೆದಿದೆ.
ಝಳಕಿ ಗ್ರಾಮಕ್ಕೆ ಸೇರಿದ ಗುಂಡಪ್ಪ, ಹವಳಪ್ಪ ಹಾಗೂ ಭೀಮಾಶಂಕರ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಗೋಳಾ ಲಕ್ಕಮ್ಮ ಜಾತ್ರೆಗೆ ಹೋಗಿದ್ದ ವೇಳೆ ದಲಿತರು ಮತ್ತು ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿಯಾಗಿದೆ ಎಂದು ಹೇಳಲಾಗಿದ್ದು, ಜಾತ್ರೆಯಿಂದ ವಾಪಸ್ಸಾಗುವ ವೇಳೆ ಭೂಸನೂರು ಗ್ರಾಮದಲ್ಲಿ ನೀರು ಕೇಳಿದ ವೇಳೆ ಗ್ರಾಮದ ಕೆಲವರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 30 ಜನರಿದ್ದ ಗುಂಪಿನಿಂದ ಈ ಹಲ್ಲೆ ನಡೆದಿರುವುದಾಗಿ ದೂರಲಾಗಿದೆ.
ಹಲ್ಲೆಗೊಳಗಾದವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಲಿತ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story