ಭದ್ರತಾ ಪಡೆಗಳಿಂದ ಅಪ್ರಾಪ್ತರು ಸೇರಿ 17 ಮಂದಿ ಗ್ರಾಮಸ್ಥರ ಹತ್ಯೆ: ನ್ಯಾಯಾಂಗ ಆಯೋಗದ ವರದಿ
'ನಕ್ಸಲರು ಎಂಬ ವಾದಕ್ಕೆ ಪುರಾವೆಯಿಲ್ಲ'
ರಾಯ್ಪುರ, ಡಿ.1: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ 2012ರ ಜೂನ್ನಲ್ಲಿ ನಡೆದ 17 ಮಂದಿ ಸ್ಥಳೀಯರ ಹತ್ಯೆ ಪ್ರಕರಣದಲ್ಲಿ ಭದ್ರತಾ ಪಡೆಗಳ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ.
ಸಮಿತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಇದನ್ನು ಸಚಿವ ಸಂಪುಟದ ಸಭೆಯಲ್ಲಿ ಅಂಗೀಕರಿಸಿದ ಬಳಿಕ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಸರ್ಕೆಗುಡ ಗ್ರಾಮದಲ್ಲಿ 2012ರ ಜೂನ್ 28ರಂದು ರಾತ್ರಿ ನಡೆದ ಘಟನೆಯಲ್ಲಿ 7 ಅಪ್ರಾಪ್ತ ವಯಸ್ಕರ ಸಹಿತ 17 ಮಂದಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಇವರು ಮಾವೋವಾದಿ ಸಂಘಟನೆಯ ಸದಸ್ಯರು ಎಂದು ಭದ್ರತಾ ಪಡೆಗಳು ಹೇಳಿಕೆ ನೀಡಿದ್ದವು.
ಆದರೆ, ಭದ್ರತಾ ಪಡೆಗಳು ಅಮಾಯಕ ಸ್ಥಳೀಯರನ್ನು ಹತ್ಯೆ ಮಾಡಿವೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಮಧ್ಯಪ್ರದೇಶ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾ. ವಿಕ್ಸೆ ಅಗರ್ವಾಲ್ ನೇತೃತ್ವದ ಸಮಿತಿಯನ್ನು ರಚಿಸುವಂತೆ ಅಂದಿನ ಮುಖ್ಯಮಂತ್ರಿ ರಮಣ್ ಸಿಂಗ್ ಸೂಚಿಸಿದ್ದರು.
ಸಮಿತಿಯ ಎದುರು ಹೇಳಿಕೆ ನೀಡಿದ್ದ ಸ್ಥಳೀಯರು, ಮುಂಬರುವ ಉತ್ಸವದ ಪೂರ್ವಸಿದ್ಧತೆಯ ಬಗ್ಗೆ ಚರ್ಚಿಸಲು ಜೂನ್ 28ರಂದು ರಾತ್ರಿ ನೆರೆಹೊರೆಯ ಮೂರು ಗ್ರಾಮಗಳಾದ ಸರ್ಕೆಗುಡ, ಕೊಟ್ಟೆಗುಡ ಮತ್ತು ರಾಜ್ಪೆಂಟದ ಪ್ರಮುಖರ ನೇತೃತ್ವದಲ್ಲಿ ಸುಮಾರು 70 ಜನರು ಸ್ಥಳೀಯ ಮೈದಾನದಲ್ಲಿ ಸಭೆ ಸೇರಿದ್ದರು. ಸಭೆ ನಡೆಯುತ್ತಿದ್ದಂತೆಯೇ ಅಲ್ಲಿಗೆ ಆಗಮಿಸಿದ್ದ ಭದ್ರತಾ ಪಡೆಯವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದರು.
ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಭದ್ರತಾ ಪಡೆಗಳು, ಸಿಆರ್ಪಿಎಫ್ ಮತ್ತು ಛತ್ತೀಸ್ಗಢ ಪೊಲೀಸರ ತಂಡ ಮಾವೋವಾದಿ ವಿರುದ್ಧದ ಕಾರ್ಯಾಚರಣೆಯ ಅಂಗವಾಗಿ ಸಿಲ್ಗೇರ್ ಅರಣ್ಯದ ಬಳಿ ತೆರಳಿದ್ದಾಗ ಕೆಲವರ ಸಂಶಯಾಸ್ಪದ ಚಲನವಲನ ಕಂಡುಬಂದಿದೆ. ಬಳಿಕ ಗುಂಡಿನ ದಾಳಿ ನಡೆದಿದ್ದು ಭದ್ರತಾ ಪಡೆಯ ಆರು ಯೋಧರು ಗಾಯಗೊಂಡಿದ್ದಾರೆ . ಆಗ ತಾವು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದೇವೆ ಎಂದು ತಿಳಿಸಿದ್ದವು.
ಪ್ರಕರಣದ ತನಿಖೆ ನಡೆಸಿದ ಸಮಿತಿ ನವೆಂಬರ್ ಆರಂಭದಲ್ಲಿ ಸರಕಾರಕ್ಕೆ ನೀಡಿದ ವರದಿಯಲ್ಲಿ, ಭದ್ರತಾ ಪಡೆಗಳೇ ಗುಂಡಿನ ದಾಳಿ ಆರಂಭಿಸಿವೆ. ಘಟನೆ ನಡೆದಾಗ ಕತ್ತಲೆಯಿದ್ದ ಕಾರಣ ತಮ್ಮದೇ ತಂಡದವರು ಹಾರಿಸಿದ ಗುಂಡು ಆರು ಮಂದಿ ಯೋಧರಿಗೆ ತಗಲಿರುವ ಸಾಧ್ಯತೆಯಿದೆ. ಗಾಯಗೊಂಡವರ ಬಲಕಾಲ ಬೆರಳು, ಪಾದಕ್ಕೆ ಗುಂಡೇಟು ತಗಲಿರುವುದರಿಂದ ಈ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಗ್ರಾಮಸ್ಥರ ಪರ ವಾದಿಸಿದ್ದ ವಕೀಲರ ತಂಡದಲ್ಲಿದ್ದ ಸುಧಾ ಭಾರದ್ವಾಜ್ರನ್ನು ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿಸಲಾಗಿದೆ.